ದೆಹಲಿ: ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಕೋರಿಗೆ ಮೇರೆಗೆ, ಅವರಿದ್ದ ಸೆಲ್ಗೆ ಇಬ್ಬರು ಕೈದಿಗಳನ್ನು ವರ್ಗಾಯಿಸಿದ ತಿಹಾರ್ ಜೈಲಿನ ಜೈಲು ಸಂಖ್ಯೆ 7ರ ಸೂಪರಿಂಟೆಂಡೆಂಟ್ಗೆ ಜೈಲು ಆಡಳಿತವು ನೋಟಿಸ್ ನೀಡಿದೆ.
ಖಿನ್ನತೆ ಮತ್ತು ಒಂಟಿತನ ಅನುಭವಿಸುತ್ತಿರುವ ಕಾರಣ ಇಬ್ಬರು ಕೈದಿಗಳನ್ನು ತಮ್ಮ ಸೆಲ್ಗೆ ವರ್ಗಾಯಿಸುವಂತೆ ಸತ್ಯೇಂದ್ರ ಜೈನ್ ಮನವಿ ಮಾಡಿಕೊಂಡಿದ್ದರು. ಅವರ ಕೋರಿಕೆ ಮೇರೆಗೆ ಇಬ್ಬರು ಕೈದಿಗಳನ್ನು ಜೈನ್ ಇರುವ ಸೆಲ್ಗೆ ವರ್ಗಾಯಿಸಲಾಗಿತ್ತು.
ಅಧೀಕ್ಷಕರು ಈ ವಿಚಾರವನ್ನು ಜೈಲು ಆಡಳಿತಕ್ಕೆ ತಿಳಿಸದೇ ಅಥವಾ ಚರ್ಚಿಸದೆ ಕೈದಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಚಾರ ಜೈಲು ಆಡಳಿತ ಮಂಡಳಿಗೆ ತಿಳಿಯುತ್ತಲೇ ಸಂಬಂಧಪಟ್ಟ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಕೈದಿಗಳನ್ನು ವಾಪಸ್ ಬೇರೆ ಸೆಲ್ಗಳಿಗೆ ವರ್ಗಾಯಿಸಲಾಗಿದೆ.
‘ಮಾರ್ಗಸೂಚಿಗಳನ್ನು ಅನುಸರಿಸದೆ ಕೈದಿಗಳನ್ನು ಸತ್ಯೇಂದ್ರ ಜೈನ್ ಅವರಿದ್ದ ಸೆಲ್ಗೆ ವರ್ಗಾಯಿಸಲಾಗಿದೆ. ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಜೈಲು ಆಡಳಿತಕ್ಕೆ ತಿಳಿಸದಿದ್ದಕ್ಕಾಗಿ ವಿವರಣೆಯನ್ನು ಕೋರಿ ಡೈರೆಕ್ಟರ್ ಜನರಲ್ ಸಂಜಯ್ ಬೇನಿವಾಲ್ ಅವರು ತಿಹಾರ್ ಜೈಲಿನ ಜೈಲು ಸಂಖ್ಯೆ 7 ರ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಜೈನ್ ಅವರನ್ನು 2022ರ ಮೇ 31 ರಂದು ಬಂಧಿಸಿತ್ತು.