ಸಿದ್ಧಾರ್ಥನಗರ: ಮುಸ್ಲಿಂ ಶಾಸಕಿ ಭೇಟಿ ನೀಡಿದ ಬಳಿಕ ದೇವಾಲಯವನ್ನು ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.
ದುಮಾರಿಯಾ ಗಂಜ್ನ ಸಮಾಜವಾದಿ ಪಕ್ಷದ ಶಾಸಕಿ ಸಯೀದಾ ಖಾತೂನ್ ಅವರು, ಸ್ಥಳೀಯರ ಆಹ್ವಾನ ಮೇರೆಗೆ ಭಾನುವಾರ ಸಮಯ್ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಶತ್ಚಂಡಿ ಮಹಾಯಜ್ಞದಲ್ಲಿ ಭಾಗವಹಿಸಿದ್ದರು.
ಶಾಸಕಿ ದೇಗುಲದಿಂದ ತೆರಳಿದ ಸ್ವಲ್ಪ ಸಮಯದಲ್ಲೇ ಕೆಲವರು ಗಂಗಾಜಲ ಸಿಂಪಡಿಸಿ ದೇಗುಲದ ಆವರಣವನ್ನು ಶುದ್ಧೀಕರಿಸಿ, ಮಂತ್ರ ಪಠಣ ಮಾಡಿದ್ದಾರೆ.
ದೇವಸ್ಥಾನ ಇರುವ ಬಧಾನಿ ಚಾಫಾದ ನಗರ ಪಂಚಾಯತ್ ಮುಖ್ಯಾಧಿಕಾರಿ ಧರ್ಮರಾಜ್ ವರ್ಮಾ ಶುದ್ಧೀಕರಣದ ನೇತೃತ್ವ ವಹಿಸಿದ್ದರು. ಶಾಸಕರನ್ನು ಕೆಲವು ಅನೀತಿವಂತ ಜನರು ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾಸಕಿ ಸಯೀದಾ ಖಾತೂನ್ ಮುಸ್ಲಿಮಳಾಗಿದ್ದು, ಹಸುವಿನ ಮಾಂಸ ತಿನ್ನುತ್ತಾರೆ. ಅವರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಸ್ಥಳ ಅಶುದ್ಧವಾಗಿತ್ತು ಎಂದ ಅವರು, ಈಗ ಸಂಪೂರ್ಣ ಪರಿಶುದ್ಧಗೊಳಿಸಲಾಗಿದ್ದು ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.
‘ನನ್ನ ಜೊತೆಗಿರುವ ಹಲವು ಬ್ರಾಹ್ಮಣರು ಮತ್ತು ಸ್ವಾಮೀಜಿಗಳು ಸಮಯ್ ಮಾತಾ ದೇಗುಲಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ನಾನು ದೇವಸ್ಥಾನಕ್ಕೆ ಹೋಗಿದ್ದೆ. ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಈ ಪ್ರದೇಶದ ಎಲ್ಲ ಜನರಿಗೂ ನಾನು ಶಾಸಕಿ, ಎಲ್ಲಿಗೆ ಕರೆದರೂ ಹೋಗುತ್ತೇನೆ’ಎಂದು ಖತೂನ್ ಹೇಳಿದ್ದಾರೆ.
ಶಾಸಕಿಯನ್ನು ಮಹಾಯಜ್ಞದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಅದರಂತೆ ಅವರು ಇಲ್ಲಿಗೆ ಆಗಮಿಸಿದ್ದರು ಎಂದು ಪುರೋಹಿತ ಶ್ರೀ ಕೃಷ್ಣ ದತ್ತ ಶುಕ್ಲಾ ಹೇಳಿದ್ದಾರೆ.