ನವದೆಹಲಿ: ಖಾಲಿಸ್ತಾನಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ಯತ್ನಕ್ಕೆ ಸಂಬಂದಿಸಿದಂತೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ
ಕರಿಛಾಯೆ ಮೂಡಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತಕ್ಕೆ ಬರುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಪನ್ನೂ ಹತ್ಯೆ ಯತ್ನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾಗಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೈಡನ್ ಅವರು ಭಾರತಕ್ಕೆ ಬಾರದಿರಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಕ್ವಾಡ್ ಶೃಂಗ ಮುಂದೂಡಿಕೆ: ಬೈಡನ್ ಭಾರತಕ್ಕೆ ಭೇಟಿ ನೀಡಿದ್ದರೆ ಜನವರಿ 27ರಂದು ‘ಕ್ವಾಡ್’ ಶೃಂಗಸಭೆ ಆಯೋಜಿಸಲು ಯೋಜಿಸಿದ್ದ ಭಾರತ, ಇದೀಗ ಶೃಂಗವನ್ನು ಮುಂದೂಡಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಮುಂದಿನ ವರ್ಷದ ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಜೋ ಬೈಡನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು ಎಂದು ಭಾರತ
ದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಸೆಪ್ಟೆಂಬರ್ನಲ್ಲಿ ತಿಳಿಸಿದ್ದರು.
ಆದರೆ ಬೈಡನ್ ಅವರನ್ನು ಆಹ್ವಾನಿಸಿದ್ದಕ್ಕೆ ಸಂಬಂಧಿಸಿದಂತೆ ಭಾರತದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿರಲಿಲ್ಲ. ಬೈಡನ್ ಅವರು ಭಾರತಕ್ಕೆ ಬರಲು ಆಗುವುದಿಲ್ಲ ಎಂದು ಶ್ವೇತನಭವನ ಆಗಲೇ ಭಾರತಕ್ಕೆ ತಿಳಿಸಿತ್ತು ಎಂದೂ ಮೂಲಗಳು ತಿಳಿಸಿವೆ.
ಬೈಡನ್ ಮುಂದಿನ ಅಧ್ಯಕ್ಷ ಚುನಾವಣೆ ಮತ್ತು ಹಮಾಸ್– ಇಸ್ರೇಲ್ ಬಿಕ್ಕಟ್ಟಿನ ಬಗ್ಗೆ ಹೆಚ್ಚಿನ ಗಮನಹರಿಸಿರು
ವುದರಿಂದ ಭಾರತದ ಆಹ್ವಾನವನ್ನು ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ.
ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನು ಒಳಗೊಂಡಿರುವ ಕ್ವಾಡ್ ಶೃಂಗವನ್ನು ಜನವರಿ ಬದಲಿಗೆ 2024ರ ಅಂತ್ಯದ ವೇಳೆಗೆ ನಡೆಸಬಹುದಾದ ಪರಿಷ್ಕೃತ ದಿನಾಂಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈಚೆಗೆ ನಡೆದಿದ್ದ ‘2+2’ ಸಚಿವರ ಸಂವಾದ: ಅಮೆರಿಕ ಕೆಲ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಭಾರತಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ನವೆಂಬರ್ನಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಅವರು ಇಲ್ಲಿ ‘2+2’ ಸಚಿವರೊಂದಿಗೆ ಸಂವಾದ ನಡೆಸಿದ್ದರು.
ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೋನಾಥನ್ ಫಿನರ್ ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಸ್ತುತ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಅವರು ನವದೆಹಲಿ ಪ್ರವಾಸದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.