ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ94ನೇ ಜನ್ಮದಿನದ ಅಂಗವಾಗಿ ‘ಸದೈವ ಅಟಲ್’ ಸ್ಮಾರಕವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ವಾಜಪೇಯಿ ಕುಟುಂಬದವರು ಸ್ಮಾರರಕ್ಕೆ ನಮನ ಸಲ್ಲಿಸಿದರು.
ಗಣ್ಯರು ಸ್ಮಾರಕಕ್ಕೆ ನಮನ ಸಲ್ಲಿಸುವ ವೇಳೆಯೇ ಖ್ಯಾತ ಗಾಯಕ ಪಂಕಜ್ ಉದಾಸ್ ಅವರ ಕಂಠದಲ್ಲಿ ಭಕ್ತಿ ಗೀತೆಗಳು ಮೂಡಿಬರುತ್ತಿತ್ತು. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿರುವ ಟ್ರಸ್ಟ್ ಈ ಸ್ಮಾರಕ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಕೇಂದ್ರಕೇಂದ್ರ ಲೋಕೋಪಯೋಗಿ ಇಲಾಖೆ 1.5 ಎಕರೆ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಿಸಿದೆ. ಈ ಯೋಜನೆಗೆ ಒಟ್ಟು ₹10.51 ವೆಚ್ಚವಾಗಿದೆ. ಅಟಲ್ ಸ್ಮೃತಿ ಸಮಿತಿ ನಿಧಿಯನ್ನು ಈ ಯೋಜನೆಗೆ ಬಳಸಲಾಗಿದೆ.
ಸುಮಿತ್ರಾ ಮಹಾಜನ್, ಬಿಹಾರ್ ರಾಜ್ಯಪಾಲ ಲಾಲ್ಜಿ ತಂಡನ್, ಗುಜರಾತ್ ರಾಜ್ಯಪಾಲ ಒ.ಪಿ. ಕೊಹ್ಲಿ, ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಮಲ್ಹೋತ್ರ ಮತ್ತು ರಾಮ್ ಲಾಲ್ ಈ ಸಮಿತಿಯ ಸಂಸ್ಥಾಪನ ಸದಸ್ಯರು.
ಈ ಸ್ಮಾರಕದ ಗೋಡೆಗಳ ಮೇಲೆ ವಾಜಪೇಯಿ ಅವರ ಕವನಗಳನ್ನು ಕೆತ್ತಿಸಲಾಗಿದೆ.
‘ಈ ದೇಶದ ಬಗ್ಗೆ ವಾಜಪೇಯಿ ಅವರು ಕಂಡ ಕನಸನ್ನು ನನಸು ಮಾಡುವ ಮಾರ್ಗದಲ್ಲಿ ನಾವು ಸಾಗುತ್ತೇವೆ’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.