ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಪ್ರಮಾಣದ ಮೀಸಲಾತಿಯಿಂದ ಮೂಲ ಆಶಯಕ್ಕೆ ಧಕ್ಕೆ: ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ ದ್ವಿಸದಸ್ಯ ನ್ಯಾಯಪೀಠದ ತೀರ್ಪು
Published 25 ಮೇ 2023, 16:23 IST
Last Updated 25 ಮೇ 2023, 16:23 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯ ಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಮೀಸಲಾತಿ ನೀಡುವುದರಲ್ಲಿ ನಿರತವಾಗಬಾರದು. ಇದರಿಂದ ಮೀಸಲಾತಿಯ ಮೂಲ ಉದ್ದೇಶವೇ ವಿಫಲಗೊಳ್ಳಲಿದೆ. ಈ ನಡೆಯು ಅಸಾಂವಿಧಾನಿಕವಾದುದೆಂದು ಈಗಾಗಲೇ ಹೇಳಲಾಗಿದ್ದು, ಇದರಿಂದ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯೂ ಆಗಲಿದೆ’ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಮಧ್ಯಪ್ರದೇಶ ಸರ್ಕಾರವು 2022ರ ಮೇ 12ರಂದು ಹೊರಡಿಸಿದ್ದ ಆದೇಶವನ್ನು ‍ಪ್ರಶ್ನಿಸಿ ವೀಣಾ ವಾದಿನಿ ಶಿಕ್ಷಕರ ತರಬೇತಿ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಇದರ ವಿರುದ್ಧ ಶಿಕ್ಷಣ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. 

ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ (ಕಳೆದ ವಾರ ನಿವೃತ್ತರಾಗಿದ್ದಾರೆ) ಹಾಗೂ ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ನ್ಯಾಯಪೀಠ, ‘ಒಟ್ಟು ಸೀಟುಗಳಲ್ಲಿ ಶೇ 75ರಷ್ಟು ಸೀಟುಗಳನ್ನು ಸ್ಥಳೀಯರಿಗೆ ಮೀಸಲಿಡುವುದು ಅವೈಜ್ಞಾನಿಕ. ಇದು ಅಸಾಂವಿಧಾನಿಕ ನಡೆ ಎಂದು ಪ್ರದೀಪ್‌ ಜೈನ್‌ ಪ್ರಕರಣದಲ್ಲೇ (1984) ಸ್ಪಷ್ಟಪಡಿಸಲಾಗಿದೆ’ ಎಂದು ತಿಳಿಸಿತು. 

‘ದೊಡ್ಡ ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸುವುದರಿಂದ ಯಾವ ಆಶಯವೂ ಈಡೇರುವುದಿಲ್ಲ. ಬದಲಾಗಿ ಅದು ಮೀಸಲಾತಿಯ ಮೂಲ ಉದ್ದೇಶಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಈ ವಿಚಾರವಾಗಿ ತೀರ್ಮಾನ ಕೈಗೊಳ್ಳುವಾಗ ಸಂಬಂಧಪಟ್ಟವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನೆರಡು ತಿಂಗಳಲ್ಲೇ ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ.

‘2022–23ನೇ ಸಾಲಿನ ಶೈಕ್ಷಣಿಕ ವರ್ಷವು ಈಗಾಗಲೇ ಆರಂಭವಾಗಿದೆ. ಹೀಗಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಾವು ಬಯಸುವುದಿಲ್ಲ. ಆದರೆ ತನ್ನ ನಿರ್ಧಾರ ಮರು ಪರಿಶೀಲಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ’ ಎಂದು ತಿಳಿಸಿದೆ.

‘ರಾಜ್ಯ ಸರ್ಕಾರವು ಸ್ಥಳೀಯರಿಗೆ ಶೇ 75ರಷ್ಟು ಸೀಟು ಮೀಸಲಿಡುವಂತೆ ಆದೇಶಿಸಿದೆ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಕಳೆದ ಎರಡು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಹೊರಗಿನವರಿಗೆ ಮೀಸಲಿಟ್ಟಿದ್ದ ಶೇ 25ರಷ್ಟು ಸೀಟುಗಳು ಭರ್ತಿಯಾಗಿವೆ. ಆದರೆ ಸ್ಥಳೀಯರಿಗೆ ಮೀಸಲಿಟ್ಟಿದ್ದ ಸೀಟುಗಳು ಭರ್ತಿಯಾಗದೆ ಉಳಿದಿವೆ’ ಎಂದು ಅರ್ಜಿದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT