ನವದೆಹಲಿ: ಈ ಬಾರಿ ದೀಪಾವಳಿ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ವಲಯದಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
‘ಪಟಾಕಿ ಸಿಡಿಸದೇ ದೀಪಾವಳಿ ಆಚರಿಸಲು ಪ್ರಯತ್ನಿಸಿ..’ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟ ನಿಷೇಧವನ್ನು ಅಕ್ಟೋಬರ್ 31ರ ವರೆಗೂ ಮುಂದುವರಿಸಿದೆ.
2016ರ ನವೆಂಬರ್ನಲ್ಲಿ ರಾಷ್ಟ್ರ ರಾಜಧಾನಿ ವಲಯದಲ್ಲಿ ಪಟಾಕಿ ಮಾರಾಟಕ್ಕೆ ಕೋರ್ಟ್ ನಿಷೇಧ ಹೇರಿತ್ತು. ಇದೇ ಸೆ.12ರ ತೀರ್ಪಿನಲ್ಲಿ ಪಟಾಕಿ ಮೇಲಿನ ತಡೆಯನ್ನು ತೆರವುಗೊಳಿಸಿ ನವೆಂಬರ್ 1ರಿಂದ ಮಾರಾಟಕ್ಕೆ ಅನುಮತಿ ನೀಡಿರುವುದಾಗಿ ನ್ಯಾಯಮೂರ್ತಿ ಎ ಕೆ ಸಿಕ್ರಿ ನೇತೃತ್ವದ ನ್ಯಾಯಪೀಠ ಹೇಳಿದೆ.
ಅ.19ರಂದು ದೀಪಾವಳಿ ಹಬ್ಬದ ಆಚರಣೆ ನಡೆಯಲಿದ್ದು, ಈ ವೇಳೆ ಖರೀದಿಗೆ ಪಟಾಕಿ ಲಭ್ಯವಿರುವುದಿಲ್ಲ.
ಪಟಾಕಿ ಸಿಡಿತದಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಕೋರ್ಟ್ 2016ರಲ್ಲಿ ಪಟಾಕಿ ಮಾರಾಟಕ್ಕೆ ತಡೆ ನೀಡಿತ್ತು.