ಗಾಜಿಯಾಬಾದ್(ಪಿಟಿಐ): `ತನ್ನ ಮಗಳು ಆರುಷಿ ಮತ್ತು ಹೇಮರಾಜ್ ಆಕ್ಷೇಪಾರ್ಹ ರೀತಿಯ್ಲ್ಲಲಿ ಇದ್ದುದನ್ನು ಕಂಡು ಕೆರಳಿದ ದಂತ ವೈದ್ಯ ರಾಜೇಶ್ ತಲ್ವಾರ್, ಅವರಿಬ್ಬರನ್ನು ಗಾಲ್ಫ್ ಸ್ಟಿಕ್ ಹಾಗೂ ಹರಿತವಾದ ಆಯುಧದಿಂದ ಹೊಡೆದು ಕೊಂದಿದ್ದಾರೆ' ಎಂದು ಮಂಗಳವಾರ ಸಿಬಿಐ ಹೇಳಿದೆ.
ಆರುಷಿ-ಹೇಮರಾಜ್ ಕೊಲೆ ಪ್ರಕರಣದ ಎರಡನೇ ತನಿಖಾ ತಂಡದ ನೇತೃತ್ವವಹಿಸಿದ್ದ ಸಿಬಿಐ ಹೆಚ್ಚುವರಿ ಎಸ್ಪಿ ಎಜಿಎಲ್ ಕೌಲ್ ಈ ವಿಷಯವನ್ನು ವಿಶೇಷ ನ್ಯಾಯಾಲಯದಲ್ಲಿ ಪಾಟಿ ಸವಾಲಿನ ವೇಳೆ ತಿಳಿಸಿದ್ದಾರೆ.
ಕೊಲೆ ನಡೆದ ರಾತ್ರಿಯ ಘಟನಾವಳಿಗಳನ್ನು ಕೌಲ್ ಹೀಗೆ ವಿವರಿಸಿದ್ದಾರೆ: ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ರಾಜೇಶ್ ತಲ್ವಾರ್ ಕೊಲೆ ನಡೆದ ದಿನದ ರಾತ್ರಿ 12 ಗಂಟೆಗೆ ಸದ್ದಿಗೆ ಎಚ್ಚರಗೊಂಡಿದ್ದಾರೆ.
ಹೇಮರಾಜ್ ಕೊಠಡಿಯ ಕಡೆಯಿಂದ ಶಬ್ದ ಬಂದಿದೆ. ಹೇಮರಾಜ್ ಕೊಠಡಿಗೆ ಹೋದಾಗ ಆತ ಅಲ್ಲಿ ಇರಲಿಲ್ಲ. ನಂತರ ಅವರು ಆರುಷಿ ಕೊಠಡಿಗೆ ಹೋಗಿದ್ದಾರೆ. ಅಲ್ಲಿ ಹಾಸಿಗೆಯ ಮೇಲೆ ಆರುಷಿ-ಹೇಮರಾಜ್ ಆಕ್ಷೇಪಾರ್ಹ ರೀತಿಯಲ್ಲಿ ಮಲಗಿದ್ದನ್ನು ಕಂಡ ರಾಜೇಶ್ ಕೋಪಗೊಂಡು ಹೇಮರಾಜ್ ತಲೆಗೆ ಗಾಲ್ಫ್ ಸ್ಟಿಕ್ನಿಂದ ಹೊಡೆದಿದ್ದಾರೆ. ಮತ್ತೊಮ್ಮೆ ತಲೆಗೆ ಹೊಡೆದಾಗ, ಆ ಹೊಡೆತ ಆರುಷಿ ತಲೆಗೆ ಬಿದ್ದಿದೆ. ಗಾಯಗೊಂಡ ಹೇಮರಾಜ್ನನ್ನು ರಾಜೇಶ್ ತಲ್ವಾರ್ ತಾರಸಿಗೆ ಎಳೆದೊಯ್ದು ಮೂಲೆಯೊಂದಕ್ಕೆ ತಳ್ಳಿ, ಕತ್ತು ಸೀಳಿದ್ದಾರೆ.
ಈ ಗದ್ದಲದಿಂದ ಎಚ್ಚೆತ್ತ ರಾಜೇಶ್ ಪತ್ನಿ ನೂಪುರ್, ಆರುಷಿ ಕೊಠಡಿಯತ್ತ ಧಾವಿಸಿದ್ದಾರೆ. ವೈದ್ಯ ದಂಪತಿ ಆರುಷಿಯ ನಾಡಿ ಮಿಡಿತ ಪರೀಕ್ಷಿಸಿದ್ದಾರೆ. ಆಕೆ ಸಾವಿನ ಅಂಚಿನಲ್ಲಿದ್ದಾಳೆ ಎಂದು ಗೊತ್ತಾಗಿದೆ. ಭಯಗೊಂಡ ದಂಪತಿ, ಹೇಮರಾಜ್ ಸತ್ತರೆ ಈ ಘಟನೆ ಬಯಲಿಗೆ ಬರುವುದಿಲ್ಲ ಎಂದು ಭಾವಿಸಿದ್ದಾರೆ ' ಎಂದು ಕೌಲ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಹೇಮರಾಜ್ ಕೊಠಡಿಯಲ್ಲಿ ಎರಡು ಗಾಲ್ಫ್ ಸ್ಟಿಕ್ಗಳು ಲಭ್ಯವಾಗಿವೆ. `ಗಾಲ್ಫ್ಸ್ಟಿಕ್ ಬಳಸಿ ಹೊಡೆದಿದ್ದರಿಂದ ಆರುಷಿ ಹಣೆಯ ಮೇಲೆ `ವಿ ಅಥವಾ ಯು' ಆಕಾರದಲ್ಲಿ ಗಾಯಗಳಾಗಿವೆ' ಎಂದು ಕೌಲ್ ಹೇಳಿದ್ದಾರೆ.
`ಸಾಕ್ಷ್ಯಗಳಿದ್ದರೂ ಬಂಧಿಸಲಾಗಲಿಲ್ಲ': `ಆರುಷಿ- ಹೇಮರಾಜ್ ಕೊಲೆ ಪ್ರಕರಣದಲ್ಲಿ ಆರೋಪಿ ನೂಪುರ್ ತಲವಾರ್ ಅವರನ್ನು ಬಂಧಿಸಲು ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿದ್ದರೂ, ಹಿರಿಯ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸದಂತೆ ತಡೆದರು' ಎಂದು ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ನಡೆದ ಪಾಟಿ ಸವಾಲಿನ ವೇಳೆ ಕೌಲ್ ತಿಳಿಸಿದರು.
ಆರುಷಿ ಕೊಲೆ ಪ್ರಕರಣದ ಎರಡನೇ ಅವಧಿಯ ತನಿಖಾ ತಂಡದ ನೇತೃತ್ವ ವಹಿಸಿರುವ ಕೌಲ್ ಅವರನ್ನು ಆರೋಪಿ ಪರ ವಕೀಲರು `ಸಾಕ್ಷ್ಯಗಳಿದ್ದರೂ ಆರುಷಿ ತಾಯಿ ನೂಪುರ್ ಅವರನ್ನು ಏಕೆ ಬಂಧಿಸಲಿಲ್ಲ'? ಎಂದು ಪ್ರಶ್ನಿಸಿದ್ದರು.
`ಹಿರಿಯ ಸಿಬಿಐ ಅಧಿಕಾರಿ ಡಿಐಜಿ ನೀಲಭ್ ಕಿಶೋರ್ ಅವರು ನನಗೆ ಬೆಂಬಲ ನೀಡಲಿಲ್ಲ. ಆಕೆಯನ್ನು ಬಂಧಿಸಲು ಅನುಮತಿ ನೀಡಲಿಲ್ಲ. ಕಿಶೋರ್ ನನ್ನ ಹಿರಿಯ ಅಧಿಕಾರಿಯಾಗಿದ್ದರಿಂದ, ಅವರ ಅನುಮತಿ ಇಲ್ಲದೇ ನೂಪರ್ ಅವರನ್ನು ಬಂಧಿಸಲು ಸಾಧ್ಯವಿರಲಿಲ್ಲ' ಎಂದು ಕೌಲ್ ಹೇಳಿದರು.
ಕೊಲೆ ಪ್ರಕರಣದಲ್ಲಿ ನೂಪುರ್ ಅವರ ಪಾತ್ರದ ಕುರಿತು ಮ್ಯಾಜಿಸ್ಟ್ರೇಟ್ ಎದುರು ಸಲ್ಲಿಸಿರುವ ಅಂತಿಮ ವರದಿಯಲ್ಲಿ ವಿವರಿಸಲಾಗಿದೆ.
ವಿಶೇಷ ನ್ಯಾಯಾಲಯದಲ್ಲಿ ಆರುಷಿ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದ್ದು, ಬುಧವಾರ ವಿಚಾರಣೆ ಪೂರ್ಣಗೊಂಡಿತು.
ಇದಕ್ಕೆ ಮುನ್ನ ಕೌಲ್ ಅವರು, ಆರುಷಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಜೇಶ್ ಸಹೋದರ ದಿನೇಶ್ ತಲ್ವಾರ್ ಮತ್ತು ಕುಟುಂಬ ಸ್ನೇಹಿತ ಸುನಿಲ್ ಚೌಧರಿ ವಿರುದ್ಧ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಾಧಾರಗಳಿದ್ದು, ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಬಹುದು ಎಂದು ಹೇಳಿದ್ದರು.
ಆದರೆ ಹಿರಿಯ ಅಧಿಕಾರಿ ಕಿಶೋರ್ ಮತ್ತು ಜಂಟಿ ನಿರ್ದೇಶಕ ಜಾವೇದ್ ಅಹ್ಮದ್ ಅವರು, `ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲ. ಹಾಗಾಗಿ ಕೌಲ್ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.