ನವದೆಹಲಿ (ಪಿಟಿಐ): ಉತ್ತಾರಖಂಡದ ಹಲವು ಭಾಗಗಳಲ್ಲಿ ಭಾರಿ ಹಿಮಪಾತ ಆಗುತ್ತಿರುವುದರಿಂದ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿಯು ಚುನಾವಣಾ ಆಯೋಗಕ್ಕೆ ಮಂಗಳವಾರ ಮನವಿ ಮಾಡಿದೆ.
ಇದರ ಜೊತೆಗೆ ಉತ್ತರ ಪ್ರದೇಶದಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಆಡಳಿತಾರೂಢ ಬಿಎಸ್ಪಿಗೆ ಆಪ್ತರಾಗಿರುವ ಸರ್ಕಾರಿ ಅಧಿಕಾರಿಗಳನ್ನು ಬದಲಾಯಿಸುವಂತೆಯೂ ಅದು ಆಯೋಗವನ್ನು ಕೋರಿದೆ. ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ನೇತೃತ್ವದ ನಿಯೋಗವು ಮಂಗಳವಾರ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಮುಂದಿಟ್ಟಿದೆ.
`ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಇದರಿಂದಾಗಿ ಮತದಾರರಿಗೆ ತೊಂದರೆಯಾಗಬಹುದು. ಮಾತ್ರವಲ್ಲದೇ ವಿವಿಧ ಪಕ್ಷಗಳ ಮುಖಂಡರಿಗೂ ಅಲ್ಲಿಗೆ ತೆರಳಿ ಪ್ರಚಾರ ಮಾಡಲು ಕಷ್ಟವಾಗಬಹುದು~ ಎಂದು ನಖ್ವಿ ಹೇಳಿದರು. ಉತ್ತರಾಖಂಡದಲ್ಲಿ ಜನವರಿ 30ರಂದು ಚುನಾವಣೆ ನಡೆಯಲಿದೆ.