ನವದೆಹಲಿ: ಖಾಸಗಿ ಬ್ಯಾಂಕ್ಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ ಎನ್ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ.
ಖಾಸಗಿ ಬ್ಯಾಂಕ್ನಿಂದ ಪಡೆದ ಸಾಲವನ್ನು ಪಾವತಿಸಿಲ್ಲ ಮತ್ತು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಪ್ರಣಯ್ ಅವರ ಮೇಲಿದೆ.
ಸೋಮವಾರ ಬೆಳಗ್ಗೆ ನವದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ ಪ್ರಣಯ್ ರಾಯ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ, ಪ್ರಕರಣ ದಾಖಲಿಸಿದೆ.
ಐಸಿಐಸಿಐ ಬ್ಯಾಂಕ್ಗೆ ₹ 48 ಕೋಟಿ ನಷ್ಟವುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ ದೆಹಲಿ. ಡೆಹ್ರಾಡೂನ್ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ.
ಸಾಲ ಮರು ಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ಜಾರಿ ನಿರ್ದೇಶನಾಲಯ ಎನ್ಡಿಟಿವಿಗೆ ನೋಟಿಸ್ ನೀಡಿತ್ತು. ಆರ್ಬಿಐ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಪ್ರಣಯ ರಾಯ್. ಪತ್ನಿ ರಾಧಿಕಾ ರಾಯ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಕೆ.ವಿ.ಎಲ್ ನಾರಾಯಣ ರಾವ್ ಅವರಿಗೆ ನೋಟಿಸ್ ನೀಡಲಾಗಿತ್ತು.
ನಾವು ಹೆದರುವುದಿಲ್ಲ
ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳು ನಮ್ಮ ವಿರುದ್ಧ ನಡೆಸುತ್ತಿರುವ ಬೇಟೆ ವಿರುದ್ಧ ನಾವು ಅವಿರತವಾಗಿ ಹೋರಾಡುತ್ತೇವೆ. ಭಾರತದಲ್ಲಿ ಪ್ರಜಾಸತ್ತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ರೀತಿಯ ಪ್ರಯತ್ನಗಳಿಗೆ ಹೆದರುವುದಿಲ್ಲ ಎಂದು ಸಿಬಿಐ ದಾಳಿಗೆ ಎನ್ಡಿಟಿವಿ ಪ್ರತಿಕ್ರಿಯೆ ನೀಡಿದೆ.