ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಶನಿವಾರ ಮುಂಜಾನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
ಕಾಶ್ಮೀರ ಕಣಿವೆ ಮತ್ತು ಜಮ್ಮು ವಿಭಾಗದ ಶಿಖರಗಳಲ್ಲಿ ಹಿಮ ಸುರಿಯುತ್ತಿದೆ. ಶ್ರೀನಗರ– ಲೇಹ್ ಹೆದ್ದಾರಿಯಲ್ಲಿ ಹಿಮಪಾತ ಕಾರಣ ಸತತ ಎರಡನೇ ದಿನ ವಾಹನ ಸಂಚಾರ ಸಾಧ್ಯವಾಗಿಲ್ಲ.
ಹಾಗೆಯೇ ಜಮ್ಮು ವಿಭಾಗದ ಪೂಂಚ್ ಮತ್ತು ಶೋಪಿಯಾನ್ ಜಿಲ್ಲೆಗಳನ್ನು ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಪೀರ್ ಕಿ ಗಲಿಯಿಂದ ಪುಶಾನ್ ನಡುವೆ ಸುಮಾರು 20 ಕಿ.ಮೀ ಉದ್ದಕ್ಕೆ ರಸ್ತೆಯಲ್ಲಿ ಎರಡು ಅಡಿ ಎತ್ತರ ಹಿಮ ಬಿದ್ದಿದೆ. ಈ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ.
300 ಕಿ.ಮೀ. ಉದ್ದದ ಜಮ್ಮು– ಶ್ರೀನಗರ ಹೆದ್ದಾರಿಯಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ಮಾಡದಿರುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗಿದ್ದು, ಮನೆಗಳ ಮೇಲೆ ಹಿಮ ಹೊದಿಕೆಯಂತೆ ಕಾಣುತ್ತಿದೆ. ರಸ್ತೆಗಳು ಹಿಮಾವೃತವಾಗಿವೆ.