ನವದೆಹಲಿ (ಪಿಟಿಐ): ಅನಿಲ ಬೆಲೆ ಏರಿಕೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಿಪಿಐ ಮುಖಂಡ ಗುರುದಾಸ್ ದಾಸಗುಪ್ತಾ ಮತ್ತು ಪೆಟ್ರೋಲಿಯಂ ಸಚಿವಾಲಯದಲ್ಲಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಕಿಡಿ ಕಾರಿದ್ದಾರೆ.
ಕಳೆದ ವರ್ಷ ಅನಿಲ ಬೆಲೆ ಏರಿಕೆ ನಿರ್ಧಾರದ ಬಗ್ಗೆ ಮೊಯಿಲಿ ಸಿದ್ಧಪಡಿಸಿದ ಟಿಪ್ಪಣಿಯ ಪ್ರತಿ ಗುಪ್ತಾ ಕೈಗೆ ಕೆಲವೆ ತಾಸುಗಳಲ್ಲಿ ತಲುಪಿ ಭಾರಿ ಮುಜುಗರವನ್ನು ಎದುರಿಸಬೇಕಾಯಿತು.
ಪೆಟ್ರೋಲಿಯಂ ಸಚಿವಾಲಯದ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಹೊರಗಿನವರು ಸೇರಿಕೊಂಡು ತಮ್ಮ ಚಾರಿತ್ರ್ಯ ವಧೆಗೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೊಯಿಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಇಲಾಖೆಯ ನಿಕ್ಷೇಪ ಹೊರ ತೆಗೆಯುವ ವಿಭಾಗದ ಹಿರಿಯ ಅಧಿಕಾರಿಗಳೇ ಹೊರಗಿನವರ ಜತೆ ಕೈಜೋಡಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿರುವ ಮೊಯಿಲಿ, ಆದರೆ ಆ ಅಧಿಕಾರಿಗಳು ಯಾರು ಎಂದು ಹೇಳಲಿಲ್ಲ.
ಕಳೆದ ಒಂದು ವರ್ಷದಿಂದ ಗುಪ್ತಾ ಅವರು ತಮ್ಮ ವಿರುದ್ಧ ಆಧಾರರಹಿತ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಆಪಾದನೆಗಳನ್ನು ಮಾಡುತ್ತಿದ್ದಾರೆ. ಅವರ ಆಪಾದನೆಗಳಿಗೆ ಸೂಕ್ತ ಸಮಜಾಯಿಸಿ ನೀಡಿದರೂ ಅಪಪ್ರಚಾರ ಮುಂದುವರಿಸಲಾಗಿದೆ ಎಂದು ಮೊಯಿಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನಿಲ ಬೆಲೆ ಏರಿಕೆಗೆ ತಡೆಯಾಜ್ಞೆ ನೀಡುವಂತೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿರುವುದು ತಮ್ಮ ವಿರುದ್ಧದ ಅಪಪ್ರಚಾರದ ಒಂದು ಭಾಗ ಎಂದಿದ್ದಾರೆ.
ಸಚಿವ ಸಂಪುಟ ಒಪ್ಪಿರುವ ಸೂತ್ರದಂತೆ ಏಪ್ರಿಲ್–ಜೂನ್ ಅವಧಿಯಯ ಪರಿಷ್ಕ್ರತ ದರವನ್ನು ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಜನವರಿ 10ರಿಂದ ಜಾರಿ ಆಗುವಂತೆ ಅಧಿಸೂಚನೆ ಹೊರಡಿಸುವಂತೆ ತಾವು ಅಧಿಕಾರಿಗಳಿಗೆ ಸೂಚಿಸಿದ್ದು ನಿಜ ಎಂದು ಮೊಯಿಲಿ ತಿಳಿಸಿದ್ದಾರೆ.