ನವದೆಹಲಿ (ಪಿಟಿಐ): ಏರ್ಸೆಲ್-ಮ್ಯಾಕ್ಸಿಸ್ ಅವ್ಯವಹಾರವು ಗುರುವಾರ ಕೂಡ ಲೋಕಸಭೆಯಲ್ಲಿ ಪ್ರತಿಧ್ವನಿಸಿತಲ್ಲದೆ, ಅದೊಂದು `ದೊಡ್ಡ ಹಗರಣ~ ವಾಗಿದ್ದು ಗೃಹ ಸಚಿವ ಪಿ.ಚಿದಂಬರಂ ಪುತ್ರ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಸದನವನ್ನು ಎರಡು ಬಾರಿ ಮುಂದೂಡಲಾಯಿತು.
ಏರ್ಸೆಲ್ ಅಥವಾ ಮ್ಯಾಕ್ಸಿಸ್ನಲ್ಲಿ ಚಿದಂಬರಂ ಶೇ 5ರಷ್ಟು ಷೇರುಗಳನ್ನು ಹೊಂದಿದ್ದಾರೆ ಎಂಬ ಬಿಜೆಪಿಯ ಯಶವಂತ ಸಿನ್ಹಾ ಆರೋಪವನ್ನು ಸಚಿವರು ತಳ್ಳಿಹಾಕಿದರು. ತಮ್ಮ ಪುತ್ರ ಕಾರ್ತಿ ಚೆನ್ನೈನಲ್ಲಿ ನೀಡಿದ `ಖಾಸಗಿ ವ್ಯಕ್ತಿಯೊಬ್ಬರ ವಿರುದ್ಧ ಆರೋಪ ಹೊರಿಸಲು ಸಂಸತ್ತಿನ ವಿಶೇಷ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖೇದದ ವಿಷಯ~ ಎಂಬ ಹೇಳಿಕೆಯನ್ನು ಓದಿ ಹೇಳಿದರು.
`ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ತಿಳಿಯದು...~ ಎಂಬ ಯೇಸು ಕ್ರಿಸ್ತನ ವಾಕ್ಯವನ್ನು ಉಲ್ಲೇಖಿಸಿದರು.