ಹಿಸ್ಸಾರ್ (ಹರ್ಯಾಣ) (ಐಎಎನ್ಎಸ್): ಅಣ್ಣಾ ಹಜಾರೆ ಮತ್ತು ಅವರ ತಂಡ ಸಿದ್ಧ ಪಡಿಸಿರುವ ಜನಲೋಕಪಾಲ ಮಸೂದೆ ಕಾನೂನಾಗಿ ಜಾರಿಯಾದರೆ ತನ್ನ ಅರ್ಧದಷ್ಟು ಸಚಿವರು ಸೆರೆಮನೆ ಸೇರಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಭೀತಿಗೊಳಗಾಗಿದೆ ಎಂದು ಶನಿವಾರ ಮಾಹಿತಿ ಹಕ್ಕು (ಆರ್ ಟಿ ಐ) ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಇಲ್ಲಿ ಹೇಳಿದರು.
ಹಿಸ್ಸಾರ್ ಲೋಕಸಭಾ ಕ್ಷೇತ್ರದ ನರ್ನೌಂದ್ ಪಟ್ಟಣದಲ್ಲಿ ಅಣ್ಣಾ ತಂಡದ ಕಾಂಗ್ರೆಸ್ ವಿರೋಧಿ ಪ್ರಚಾರ ಅಭಿಯಾನ ಆರಂಭಿಸುತ್ತಾ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಕಾಂಗ್ರೆಸ್ ಮತ್ತು ಇತರರ ವಿರುದ್ಧ ಮತ ಚಲಾಯಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟ ಜನರನ್ನು ಸೆರೆಮನೆಗೆ ಅಟ್ಟಲು ಮನಸ್ಸಿಲ್ಲ. ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಇಚ್ಛೆಯೂ ಅದಕ್ಕೆ ಇಲ್ಲ. ಈ ಕಾರಣಕ್ಕಾಗಿ ಅವರು ಜನಲೋಕಪಾಲ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮಕ್ಕೆ ಅವರು ವಿವರಿಸಿದರು.