ಚೆನ್ನೈ (ಪಿಟಿಐ): ಎಐಎಡಿಎಂಕೆ ಸರ್ಕಾರ ಡಿಎಂಕೆ ಪಕ್ಷದ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷ ಡಿಎಂಕೆ ಪಕ್ಷದ ಸಾವಿರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಬುಧವಾರ ರಾಜ್ಯದಾದ್ಯಂತ `ಜೈಲ್ ಭರೋ~ ಚಳವಳಿ ನಡೆಸಿದರು.
ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ಮತ್ತು ಪುತ್ರಿ ಕನಿಮೊಳಿ, ಕೇಂದ್ರದ ಮಾಜಿ ಸಚಿವರಾದ ದಯಾನಿಧಿ ಮಾರನ್ ಮತ್ತು ಟಿ.ಆರ್. ಬಾಲು ಅವರನ್ನು ಪ್ರತಿಭಟನೆ ವೇಳೆ ಬಂಧಿಸಲಾಯಿತು.
`ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ತಮ್ಮ ಪಕ್ಷದ ನಾಯಕರನ್ನು ಬಂಧಿಸುವ ಮೂಲಕ ಎಐಎಡಿಎಂಕೆ ಸರ್ಕಾರ ರಾಜ್ಯದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ~ ಎಂದು ಜಯಲಲಿತಾ ಸರ್ಕಾರದ ವಿರುದ್ಧ ಕನಿಮೊಳಿ ಕಿಡಿಕಾರಿದರು.
`ಜೈಲ್ಭರೋ ಚಳವಳಿ~ ಯಶಸ್ವಿಯಾಗಿದೆ ಎಂದು ಸ್ಟಾಲಿನ್ ಹೇಳಿಕೊಂಡರೆ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ, `ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು~ ಎಂದು ಹೇಳಿದ್ದಾರೆ.
`ಪಕ್ಷದ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜೈಲ್ಭರೋ ಚಳವಳಿ ನಡೆಸಲು ಇತ್ತೀಚೆಗೆ ನಡೆದ ಡಿಎಂಕೆಯ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.