ಅಹಮದಾಬಾದ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆನ್ನಲಾದ 2002ರ ಗೋಧ್ರಾ ಹಿಂಸಾಚಾರಕ್ಕೆ ಸಂಬಂಧಿಸಿದ ತನಿಖೆಯ ಅಂತಿಮ ವರದಿಯ ಮಾಹಿತಿ ಮಾನವ ಹಕ್ಕು ಕಾರ್ಯಕರ್ತರಿಗೆ ನೀಡಲು ವಿಶೇಷ ತನಿಖಾ ತಂಡ (ಎಸ್ಐಟಿ) ಸೋಮವಾರ ವಿರೋಧ ವ್ಯಕ್ತಪಡಿಸಿದೆ.
ಭಾರೀ ಕುತೂಹಲ ಕೆರಳಿಸಿದ್ದ ಪ್ರಕರಣದ ತೀರ್ಪನ್ನು ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯ ಬುಧವಾರದವರೆಗೆ ಕಾಯ್ದಿರಿಸಿದೆ. ತನಿಖಾ ವರದಿಯ ಮಾಹಿತಿಯನ್ನು ತಮಗೆ ನೀಡುವಂತೆ ತೀಸ್ತಾ ಸೆಟಲ್ವಾಡ್ ಮತ್ತು ಇತರ ಕಾರ್ಯಕರ್ತರ ಕೋರಿಕೆಗೆ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ಅಸಮ್ಮತಿ ಸೂಚಿಸಿತ್ತು.
ಕಳೆದ ವಾರ ವಿಶೇಷ ತನಿಖಾ ತಂಡ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬೆನ್ನಹಿಂದೆಯೇ ಮೋದಿ ದೋಷಮುಕ್ತರಾಗುವರೆಂಬ ಊಹಾಪೋಹಗಳೂ ಹುಟ್ಟಿಕೊಂಡಿದ್ದವು.