ನವದೆಹಲಿ (ಪಿಟಿಐ): ಅಧಿಕಾರ ವಹಿಸಿಕೊಂಡ 49 ದಿನಗಳಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ತಪ್ಪಿಗಾಗಿ ದೆಹಲಿ ಜನತೆ ಕ್ಷಮೆ ಯಾಚಿಸುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
‘ಸಾರ್ವಜನಿಕರ ಅಭಿಪ್ರಾಯ ಪಡೆಯದೆ ರಾಜೀನಾಮೆ ಸಲ್ಲಿಸಿದ ನಿರ್ಧಾರ ದೊಡ್ಡ ತಪ್ಪು’ ಎಂದ ಅವರು, ‘ಎಎಪಿ ಹೊಸದಾಗಿ ಚುನಾವಣೆ ಹೋಗಲು ಬಯಸಿದೆ’ ಎಂದೂ ತಿಳಿಸಿದರು. ಅಧಿಕಾರಕ್ಕೆ ಮರಳುವ ಅವಕಾಶ ಈಗ ‘ನಗಣ್ಯ’ವಾಗಿದೆ ಎಂದರು.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಕಿರಣ್ ಬೇಡಿ ಒಲವು: ದೆಹಲಿ ವಿಧಾನಸಭೆಗೆ ಹೊಸದಾಗಿ ಚುನಾವಣೆ ನಡೆದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವಂತೆ ಆಹ್ವಾನ ಬಂದರೆ, ಸ್ವೀಕರಿಸುವುದಾಗಿ ಮಾಜಿ ಐಪಿಎಸ್ ಅಧಿಕಾರಿ,ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಬುಧವಾರ ಇಲ್ಲಿ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಈಗ ಲೋಕಸಭೆಗೆ ಆಯ್ಕೆ ಆಗಿರುವುದರಿಂದ, ಮುಂಬರುವ ವಿಧಾನಸಭಾ ಚುನಾವಣೆಗೆ ಕಿರಣ್ ಬೇಡಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅವರು ಟಿವಿ ಚಾನೆಲ್ವೊಂದಕ್ಕೆ ಉತ್ತರಿಸಿದರು.