ನವದೆಹಲಿ: ‘ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸರ್ವಪಕ್ಷಗಳ ನಿಯೋಗಕ್ಕೆ ಮಂಗಳವಾರ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬಾರದು ಎಂದು ಆಗ್ರಹಿಸಿತು. ಈ ನಿಯೋಗದ ಮನವಿಯನ್ನು ತಾಳ್ಮೆಯಿಂದ ಕೇಳಿದ ನರೇಂದ್ರ ಮೋದಿ, ಸರ್ಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪ ಇಲ್ಲವೆಂದು ಸ್ಪಷ್ಟಪಡಿಸಿದ್ದಾಗಿ ಸಿದ್ದರಾಮಯ್ಯ ಅನಂತರ ಪತ್ರಕರ್ತರಿಗೆ ತಿಳಿಸಿದರು.
‘ತಮಿಳುನಾಡು ಮುಖ್ಯಮಂತ್ರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಕೇಳಿದ್ದಾರೆ. ಅವರ ಮನವಿಯನ್ನು ಆಲಿಸಿದ್ದೇನೆ. ನೀವು ಮಂಡಳಿ ಮಾಡುವುದು ಬೇಡ ಎಂದು ಒತ್ತಾಯ ಮಾಡುತ್ತಿದ್ದೀರಿ. ನಿಮ್ಮ ಮಾತುಗಳಿಗೂ ಕಿವಿಗೊಟ್ಟಿದ್ದೇನೆ. ಆದರೆ, ಈ ಸಂಬಂಧದ ಟಿಪ್ಪಣಿ ಸಿದ್ಧವಾಗಿದೆ ಎನ್ನುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಓದಿದ್ದೇನೆ. ಅದು ಹಿಂದಿನ ಸರ್ಕಾರ ಆರಂಭಿಸಿದ ಪ್ರಕ್ರಿಯೆ ಇದ್ದಿರಬಹುದು. ನಮ್ಮ ಸರ್ಕಾರದ ಮುಂದೆ ಇಂಥ ಪ್ರಸ್ತಾಪವಿಲ್ಲ’ ಎಂದು ಮೋದಿ ಖಚಿತಪಡಿಸಿದ್ದಾಗಿ ಮುಖ್ಯಮಂತ್ರಿ ವಿವರಿಸಿದರು.
‘ಕರ್ನಾಟಕದ ಜನರಿಗೆ ಕಾವೇರಿ ಜೀವನದಿ ಎಂಬ ಸಂಗತಿ ನನಗೆ ಗೊತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಚೆಗೆ ಭೇಟಿ ಮಾಡಿ ಎಲ್ಲ ಸಂಗತಿ ತಿಳಿಸಿದ್ದಾರೆ. ಆದರೆ, ಇದರ ಹಿಂದಿರುವ ರಾಜಕಾರಣದ ಬಗ್ಗೆ ನನಗೆ ಅರಿವಿಲ್ಲ’ ಎಂದು ಪ್ರಧಾನಿ ಮಾರ್ಮಿಕವಾಗಿ ಹೇಳಿದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವಣ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಐತೀರ್ಪು ನೀಡಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಐತೀರ್ಪು ಕುರಿತು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪಿನ ವ್ಯಾಪ್ತಿ-ಗೊಳಪಟ್ಟಿರುತ್ತದೆ ಎಂದೂ ಹೇಳಲಾಗಿದೆ.
ಇದಾದ ಬಳಿಕ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೋರಿ ತಮಿಳುನಾಡು ಸರ್ವೋಚ್ಚ ನ್ಯಾಯಾಲಯದಲ್ಲಿ ಮಧ್ಯಾಂತರ ಅರ್ಜಿ ಸಲ್ಲಿಸಿದೆ. ಕಾವೇರಿ ಐತೀರ್ಪು ಪ್ರಶ್ನಿಸಿರುವ ಕರ್ನಾಟಕ ಮತ್ತಿತರ ರಾಜ್ಯಗಳ ಸಿವಿಲ್ ಮೇಲ್ಮನವಿಗಳು ಮತ್ತು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಮಧ್ಯಾಂತರ ಅರ್ಜಿ ಶೀಘ್ರ ವಿಚಾರಣೆಗೆ ಬರಲಿದ್ದು, ತಮಿಳುನಾಡು ಒತ್ತಡಕ್ಕೆ ಮಣಿದು ಆತುರದಲ್ಲಿ ನಿರ್ವಹಣಾ ಮಂಡಳಿ ರಚಿಸಬಾರದು ಎಂದು ನಿಯೋಗ ಒತ್ತಾಯಿಸಿದೆ.
ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಮಿತಿ ಸದಸ್ಯರಾಗಿದ್ದಾರೆ. ಉಸ್ತುವಾರಿ ಸಮಿತಿ ಸತತವಾಗಿ ಸಭೆ ನಡೆಸುತ್ತಿದೆ.
ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದು ಸೂಕ್ತವಲ್ಲ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಲಿದೆ ಎಂದು ನಿಯೋಗ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿತು.
ಮುಖ್ಯಮಂತ್ರಿಗಳ ನೇತೃತ್ವದ ನಿಯೋಗದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜ್ಯದ ವಿವಿಧ ಪಕ್ಷಗಳ ನಾಯಕರು, ಸಂಸದರು ಪಾಲ್ಗೊಂಡಿದ್ದರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ನಿಯೋಗದಲ್ಲಿರಲಿಲ್ಲ. ಆದರೆ, ಮಂಡ್ಯ ಲೋಕಸಭಾ ಸದಸ್ಯ ಪುಟ್ಟರಾಜು ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಬೆಳಿಗ್ಗೆ ಮುಖ್ಯಮಂತ್ರಿ ಕರೆದಿದ್ದ ಸಂಸದರ ಉಪಾಹಾರ ಸಭೆಯಲ್ಲಿ ದೇವೇಗೌಡರು ಕಾವೇರಿ ವಿವಾದ– ಹೋರಾಟದ ಹಿನ್ನೆಲೆ ಕುರಿತು ಎಲ್ಲರಿಗೂ ಅರ್ಥವಾಗುವಂತೆ ಸವಿವರವಾಗಿ ಮಾತನಾಡಿದರು.
ಜಯಾ ವಿರುದ್ಧ ಕರುಣಾ ವಾಗ್ದಾಳಿ
ಚೆನ್ನೈ (ಪಿಟಿಐ): ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಬದ್ಧ ರಾಜಕೀಯ ವೈರಿಗಳಾದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರ ನಡುವೆ ಮಾತಿನ ಸಮರ ಮುಂದುವರಿದಿದೆ.
ಈ ವಿವಾದದಲ್ಲಿ ಸರ್ವಪಕ್ಷಗಳ ಸಭೆ ಕರೆಯುವ ಅವಶ್ಯಕತೆ ಇಲ್ಲ ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರದ ಮೇಲೆ ತಕ್ಷಣ ಒತ್ತಡ ಹೇರದೆ ಕಾಲಾವಕಾಶ ನೀಡಬೇಕು ಎಂಬ ಜಯಾ ಹೇಳಿಕೆಗೆ ಕರುಣಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕಾವೇರಿ ವಿವಾದವನ್ನು ಜಯಾ ಗಂಭೀರವಾಗಿ ಪರಿಗಣಿಸುವ ಬದಲಿಗೆ ಕೇಂದ್ರವನ್ನು ಬೆಂಬಲಿಸಲು ಹೆಚ್ಚು ಆಸಕ್ತಿ ವಹಿಸಿರುವಂತೆ ಕಾಣುತ್ತಿದೆ‘ ಎಂದು ಕರುಣಾ ಮಂಗಳವಾರ ಹೇಳಿಕೆಯೊಂದರಲ್ಲಿ ಟೀಕಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ಕೊಂಡೊಯ್ದು, ಕಾವೇರಿ ನಿರ್ವಹಣಾ ಮಂಡಳಿ ರಚಿಸದಂತೆ ಒತ್ತಡ ಹೇರಲು ನಿರ್ಧರಿಸಿರುವುದನ್ನು ಕರುಣಾ ಪ್ರಸ್ತಾಪಿಸಿದ್ದಾರೆ.
‘ಸರ್ವಪಕ್ಷಗಳ ಸಭೆ ಕರೆಯುವ ಅವಶ್ಯಕತೆ ಇಲ್ಲ ಎನ್ನುತ್ತಿರುವ ಜಯಾ, ತಕ್ಷಣ ಸಭೆ ಕರೆದು ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದರೆ, ಅದರಿಂದ ಅವರಿಗೇ ಹೆಚ್ಚು ಬಲ ಸಿಗುತ್ತದೆಯಷ್ಟೇ’ ಎಂದೂ ಕರುಣಾ ಹೇಳಿದ್ದಾರೆ. ಈ ಹಿಂದಿನ ತಮ್ಮ ಸರ್ಕಾರ ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ ಎಂಬ ಜಯಾ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.
ಲೋಕಸಭೆಯಲ್ಲೂ ಪ್ರತಿಧ್ವನಿ
ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಎಐಎಡಿಎಂಕೆ ನಾಯಕ ತಂಬಿದುರೈ ಮಂಗಳವಾರ ಲೋಕಸಭೆಯಲ್ಲಿ ಮಾಡಿದ ಒತ್ತಾಯ ಕರ್ನಾಟಕದ ಸಚಿವರು ಹಾಗೂ ಸಂಸದರ ಪ್ರತಿಭಟನೆಗೆ ಕಾರಣವಾಯಿತು.
ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ತಂಬಿದುರೈ, ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ಕೆರಳಿದ ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ. ಸದಾನಂದಗೌಡ ಎಐಎಡಿಎಂಕೆ ನಾಯಕರ ಹೇಳಿಕೆಯನ್ನು ಬಲವಾಗಿ ವಿರೋಧಿಸಿದರು. ಬಿಜೆಪಿ ಸಚಿವರಿಗೆ ಕಾಂಗ್ರೆಸ್ ಸದಸ್ಯರಾದ ಧ್ರುವನಾರಾಯಣ, ಡಿ.ಕೆ. ಸುರೇಶ್, ಮುದ್ದಹನುಮೇಗೌಡ, ಬಿ.ವಿ. ನಾಯಕ್ ದನಿಗೂಡಿಸಿದರು.
ಕಾವೇರಿ ವಿವಾದ ಸುಪ್ರೀಂ ಕೋರ್ಟ್ ಮುಂದಿದ್ದು, ಸದನದಲ್ಲಿ ಚರ್ಚೆ ಮಾಡುವುದರಿಂದ ನ್ಯಾಯಾಲಯದ ಹಕ್ಕಿಗೆ ಚ್ಯುತಿ ಉಂಟುಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಂಬಿದುರೈ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕಬೇಕೆಂದು ಅನಂತ ಕುಮಾರ್ ಆಗ್ರಹಿಸಿದರು.
ಸ್ಪೀಕರ್ ಪೀಠದಲ್ಲಿದ್ದ ಅರ್ಜುನ್ ಚರಣ್ ಸೇಠಿ, ಎಐಎಡಿಎಂಕೆ ನಾಯಕರ ಹೇಳಿಕೆಯನ್ನು ಪರಿಶೀಲಿಸಿ ನ್ಯಾಯಾಲಯದ ಹಕ್ಕಿಗೆ ಚ್ಯುತಿ ಬರುವುದಾದರೆ ದಾಖಲೆಯಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.