ನವದೆಹಲಿ: ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿರುವ ಭೂ ಸ್ವಾಧೀನ ಮಸೂದೆ ಕುರಿತು ಚರ್ಚಿಸಲು ಬುಧವಾರ ಕರೆದಿದ್ದ ನೀತಿ ಆಯೋಗದ ಸಭೆಗೆ ಕರ್ನಾಟಕ ಸೇರಿ 14 ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾದರು.
ಇದರಿಂದಾಗಿ ಮಸೂದೆ ಕುರಿತು ತಲೆದೋರಿರುವ ಬಿಕ್ಕಟ್ಟು ತೀವ್ರ ಸ್ವರೂಪ ಪಡೆಯಿತು. ಆದರೆ, ‘ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ರೈತರ ಸಮೃದ್ಧಿ ಹಿತದೃಷ್ಟಿಯಿಂದ ರೂಪಿಸಲಾಗಿರುವ ಭೂಸ್ವಾಧೀನ ಮಸೂದೆಗೆ ಅಡ್ಡಿಪಡಿಸದೆ, ಪೂರ್ಣ ಸಹಕಾರ ನೀಡಬೇಕು’ ಎಂದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಮನವಿ ಮಾಡಿದರು.