ನವದೆಹಲಿ (ಪಿಟಿಐ): ನಿವೃತ್ತಿಯಾದ ಒಂದು ವರ್ಷದೊಳಗೆ ಪಿಂಚಣಿದಾರರು ಖಾಸಗಿ ಉದ್ಯೋಗದಲ್ಲಿ ತೊಡಗುವುದಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ‘ಹಿತಾಸಕ್ತಿಯ ಸಂಘರ್ಷ ಇಲ್ಲ’ ಎಂಬ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಹಿಂದೆ, ಪಿಂಚಣಿದಾರರು ಖಾಸಗಿ ಉದ್ಯೋಗಕ್ಕೆ ಹೋಗುವುದಿದ್ದರೆ ಅನುಮತಿಗಾಗಿ ಸರ್ಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು ಮತ್ತು ಅದರೊಂದಿಗೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿತ್ತು. ಸೇವೆಯಲ್ಲಿದ್ದ ಕೊನೆಯ ಮೂರು ವರ್ಷಗಳಲ್ಲಿ ಅವರು ಪ್ರತಿನಿಧಿಸಿದ ಹಿತಾಸಕ್ತಿಗಳು ಮತ್ತು ಕೈಗೊಂಡ ಕೆಲಸಗಳು ಈಗ ಕೈಗೊಳ್ಳುವ ಖಾಸಗಿ ಕೆಲಸದೊಂದಿಗೆ ಹಿತಾಸಕ್ತಿಯ ಯಾವುದೇ ಸಂಘರ್ಷ ಹೊಂದಿಲ್ಲ ಎಂಬುದನ್ನು ಪ್ರಮಾಣಪತ್ರದಲ್ಲಿ ದೃಢಪಡಿಸಬೇಕಿತ್ತು. ನಿವೃತ್ತಿಯಾಗಿ ಒಂದು ವರ್ಷದೊಳಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಕೈಗೊಳ್ಳಲು ಇದು ಅಗತ್ಯವಾಗಿತ್ತು.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ಪಿಂಚಣಿದಾರರು ಖಾಸಗಿ ಉದ್ಯೋಗ ಕೈಗೊಳ್ಳುವ ನಿಯಮಗಳನ್ನು ಪರಿಷ್ಕರಿಸಿ ಈ ಆದೇಶ ಹೊರಡಿಸಿದೆ. ಹೊಸ ನಿಯಮದ ಪ್ರಕಾರ, ಪಿಂಚಣಿದಾರರು ಸ್ವಯಂ ದೃಢೀಕೃತ ಘೋಷಣೆ ನೀಡಿದರೆ ಸಾಕು. ಭಾರತದ ವಿದೇಶಾಂಗ ಸಂಬಂಧಗಳು, ರಾಷ್ಟ್ರೀಯ ಭದ್ರತೆ ಮತ್ತು ದೇಶೀಯ ಸೌಹಾರ್ದತೆಯೊಂದಿಗೆ ಹೊಸ ಉದ್ಯೋಗ ನೀಡುತ್ತಿರುವ ಸಂಸ್ಥೆಯು ಸಂಘರ್ಷ ಹೊಂದಿಲ್ಲ ಎಂಬುದನ್ನು ಘೋಷಣೆಯಲ್ಲಿ ದೃಢಪಡಿಸಬೇಕು.
ಸರ್ಕಾರದಿಂದ ಯಾವುದೇ ಆಕ್ಷೇಪ ಬಂದಾಗ ಖಾಸಗಿ ಉದ್ಯೋಗವನ್ನು ಬಿಡುತ್ತೇನೆ ಎಂದೂ ಘೋಷಣೆಯಲ್ಲಿ ಸ್ಪಷ್ಟಪಡಿಸಬೇಕು.
ಹೆಚ್ಚಿನ ಕೆಲಸಗಳಿಗೆ ಪ್ರಮಾಣಪತ್ರ ಸಲ್ಲಿಸುವುದನ್ನು ರದ್ದುಪಡಿಸುವ ಎನ್ಡಿಎ ಸರ್ಕಾರದ ಉಪಕ್ರಮದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಒಪಿಟಿ ಹೇಳಿದೆ.