ನವದೆಹಲಿ (ಪಿಟಿಐ): ಪೋಸ್ಕೊ ಯೋಜನೆಗೆ ಪರಿಸರ ಇಲಾಖೆ ನೀಡಿರುವ ಅನುಮತಿಯನ್ನು `ಭೂಮಿಯನ್ನು ಬಲವಂತದಿಂದ ವಶಪಡಿಸಿಕೊಳ್ಳಲು ನೀಡಿರುವ ಪರವಾನಗಿ~ ಎನ್ನುವಂತೆ ಬಳಸಬಾರದು ಎಂದು ಪರಿಸರ ಸಚಿವ ಜೈರಾಂ ರಮೇಶ್ ಅವರು ಭಾನುವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಈ ಮಧ್ಯೆ ಒಡಿಶಾದ ಗೋವಿಂದ್ಪುರ ಗ್ರಾಮದಲ್ಲಿ ಪೋಸ್ಕೊದ ಉಕ್ಕು ಘಟಕಕ್ಕೆ ಜಮೀನು ವಶಪಡಿಸಿಕೊಳ್ಳುವುದರ ವಿರುದ್ಧ ಸ್ಥಳೀಯರು ನಿರಂತರ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.
`ಒಡಿಶಾದಲ್ಲಿ ಪೋಸ್ಕೊ ಉಕ್ಕು ಮತ್ತು ವಿದ್ಯುತ್ ಯೋಜನೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯಗಳು ಅನುಮತಿಯನ್ನು ನೀಡಿವೆ. ಆದರೆ ಇದನ್ನು ಬಳಸಿಕೊಂಡು ರಾಜ್ಯ ಸರ್ಕಾರ ಬಲವಂತವಾಗಿ ಭೂಸ್ವಾಧೀನ ಮಾಡಬಾರದು~ ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
`ಶಾಂತಿಯುತವಾಗಿ ಮತ್ತು ಕಾನೂನಿನ ರೀತಿ ಮಾತ್ರ ಭೂಸ್ವಾಧೀನ ಆಗುವಂತೆ ಒಡಿಶಾ ಸರ್ಕಾರ ನೋಡಿಕೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ~ ಎಂದೂ ಅವರು ಹೇಳಿದ್ದಾರೆ.ಉಕ್ಕು ಘಟಕಕ್ಕೆ ಜಮೀನು ನೀಡಲು ನಿರಾಕರಿಸಿರುವ ಗೋವಿಂದಪುರ ಗ್ರಾಮದ ಜನರು ಗ್ರಾಮದ ಪ್ರವೇಶ ದಾರಿ ಬಳಿ ಮೂರು ಸಾಲಿನ ಮಾನವ ಅಡೆತಡೆ ನಿರ್ಮಿಸಿದ್ದಾರೆ.ಪ್ರತಿಭಟನೆಯನ್ನು `ಕಾನೂನುವಿರೋಧಿ~ ಎಂದು ಒಡಿಶಾ ಸರ್ಕಾರ ಘೋಷಿಸಿದೆ.
ಎಲ್ಲಾ ಪಕ್ಷಗಳು ಪ್ರಜಾಸತ್ತಾತ್ತ್ಮಕ ನಿಯಮಗಳಿಗೆ ಮತ್ತು ಪ್ರಕ್ರಿಯೆಗಳಿಗೆ ಬದ್ಧವಾಗಿರಬೇಕು. ರಾಜ್ಯ ಸರ್ಕಾರ ಯಾವುದೇ ದುಡುಕಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ತಾವು ವಿಶ್ವಾಸ ಹೊಂದಿರುವುದಾಗಿಯೂ ಜೈರಾಂ ರಮೇಶ್ ತಿಳಿಸಿದ್ದಾರೆ.