ನವದೆಹಲಿ (ಪಿಟಿಐ): ಆಗಸ್ಟ್ 14ರವರೆಗೆ ನಡೆಯುವುದೆಂದು ನಿರೀಕ್ಷಿಸಿರುವ ಸಂಸತ್ನ ಪ್ರಸಕ್ತ ಬಜೆಟ್ ಅಧಿವೇಶನ ಒಂದು ವಾರ ಮೊಟಕಾಗುವ ಸಾಧ್ಯತೆ ಇದೆ. ಈ ವಿಚಾರ ಗುರುವಾರ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರುವ ಸಂಭವವಿದೆ.
ಜುಲೈ 31ರೊಳಗೆ ಬಜೆಟ್ ಅಂಗೀಕಾರ ಪಡೆದ ನಂತರ ಹೆಚ್ಚಿನ ಶಾಸಕಾಂಗ ವಿಷಯಗಳು ಉಳಿದಿರುವುದಿಲ್ಲ. ಈ ಹಿಂದಿನ ಯೋಜನೆಯಂತೆ, ರಾಜ್ಯಸಭೆಯಲ್ಲಿ ಅಂಗೀಕಾರವಾಗಿ, ಲೋಕಸಭೆಯಲ್ಲಿ ಬಾಕಿ ಇರುವ ಕೆಲವು ಮಸೂದೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಬಯಸಿತ್ತು.
ಆದರೆ ಈಗಿನ ಚಿಂತನೆ ಪ್ರಕಾರ, ತರಾತುರಿಯ ಕ್ರಮಗಳಿಗಿಂತ ತೀವ್ರ ಪರಿಶೀಲನೆಯ ನಂತರ ಈ ಮಸೂದೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.