ಕೊಚ್ಚಿ (ಪಿಟಿಐ): ಕುಲಾಂತರಿ ತಂತ್ರಜ್ಞಾನ ಅಭಿವೃದ್ಧಿಗೆ ವಿದೇಶಿ ಪ್ರಾಯೋಜಿತ ಸರ್ಕಾರೇತರ ಸಂಸ್ಥೆಗಳು ಅಡ್ಡಿಯಾಗಿವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇಂದ್ರ ಸಚಿವ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, ತಾವು ಪರಿಸರ ಸಚಿವರಾಗಿದ್ದಾಗ ಕುಲಾಂತರಿ ಬದನೆ ಮೇಲೆ ತಾತ್ಕಾಲಿಕ ನಿಷೇಧ ಹೇರಿದ್ದರ ಹಿಂದೆ ಯಾವುದೇ ಎನ್ಜಿಒ ಪ್ರಭಾವವೂ ಇಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಕೆ ವೇಳೆ, ಮಾನ್ಸಾಂಟೊಗೆ ಅನುಕೂಲ ಮಾಡಿಕೊಡುತ್ತಿರುವ ಆರೋಪವನ್ನು ಗ್ರೀನ್ಪೀಸ್ ಎನ್ಜಿಒ ಮಾಡಿತ್ತು. ಈಗ ಕುಲಾಂತರಿ ಬದನೆ ವಿಷಯದಲ್ಲೂ ಆಪಾದನೆ ಕೇಳಿಬಂದಿದೆ. ಆದರೆ ಅಹವಾಲು ಆಲಿಕೆಯಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿದ್ದ ನನ್ನ ನಿರ್ಧಾರದ ಹಿಂದೆ ಯಾವ ಎನ್ಜಿಒದ ಪ್ರಭಾವವೂ ಇಲ್ಲ ಎಂಬ ಬಗ್ಗೆ ದೃಢ ವಿಶ್ವಾಸವಿದೆ~ ಎಂದರು.
ಕೇರಳಕ್ಕೆ ಮೂರು ದಿನಗಳ ಭೇಟಿ ನೀಡಿರುವ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಪ್ರಧಾನಿ ಆಕ್ಷೇಪದ ಜತೆಗೆ ಸ್ಕ್ಯಾಂಡಿನೇವಿಯಾ ರಾಷ್ಟ್ರಗಳು ಬಿಟಿ ಬದನೆ ವಿರುದ್ಧದ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂಬ ದೂಷಣೆ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿರುವ ಜೈರಾಮ್, ಬಿಟಿ ಬದನೆಗೆ ತಾತ್ಕಾಲಿಕ ನಿಷೇಧ ಹೇರುವ ನಿರ್ಧಾರಕ್ಕೆ ಬರುವ ಮುನ್ನ ಏಳು ತಿಂಗಳ ಕಾಲ ಕೂಲಂಕಷ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದರು.