ಪಟ್ನಾ (ಐಎಎನ್ಎಸ್): ಬಿಜೆಪಿ ಶಾಸಕ ಅಮರನಾಥ್ ಗಾಮಿ ಅವರು ರಾಜ್ಯ ನಾಯಕತ್ವದ ವಿರುದ್ಧ ಭಾನುವಾರ ಬಹಿರಂಗವಾಗಿ ತಿರುಗಿಬಿದ್ದಿದ್ದು, ಶೀಘ್ರವೇ ಆಡಳಿತಾರೂಢ ಜೆಡಿಯು ಸೇರುವ ಸೂಚನೆ ನೀಡಿದ್ದಾರೆ.
ಬಿಜೆಪಿ, ಗಾಮಿ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ರಾಜ್ಯದ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಅವರನ್ನು `ಅಧಿಕಾರ ದಾಹಿ' ಎಂದು ಲೇವಡಿ ಮಾಡಿರುವ ಹಯಘಾಟ್ ಶಾಸಕ ಗಾಮಿ, ಮೋದಿ ಜತೆ ಕೆಲಸ ಮಾಡಲು ನಿರಾಕರಿಸಿದ್ದಾರೆ. `ಬಿಜೆಪಿ ಸಿದ್ಧಾಂತವು ವ್ಯಕ್ತಿ ಕೇಂದ್ರಿತವಾಗುತ್ತಿದೆ' ಎಂದೂ ಆರೋಪಿಸಿದ್ದಾರೆ.
` ಒಂದೆರಡು ದಿನ ಕಾದು ನೋಡಿ. ಎಲ್ಲವೂ ಸ್ಪಷ್ಟವಾಗುತ್ತದೆ' ಎಂದು ಹೇಳುವ ಮೂಲಕ ಜೆಡಿಯು ಸೇರುವ ಸೂಚನೆ ನೀಡಿದ್ದಾರೆ. ಗಾಮಿ ಅವರೊಂದಿಗೆ ಬಿಜೆಪಿಯ ಇನ್ನೂ ಮೂರು ಶಾಸಕರು ಜೆಡಿಯು ಸೇರುತ್ತಾರೆ ಎನ್ನಲಾಗಿದೆ.