ನವದೆಹಲಿ (ಪಿಟಿಐ): ಮಗನನ್ನು ತಮ್ಮ ಸಹಾಯಕನಾಗಿ ಮತ್ತು ಆ ಮೂಲಕ ಉತ್ತರಾಧಿಕಾರಿಯಾಗಿ ನೇಮಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸದೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ಆಹ್ವಾನಿಸುವ ಮೂಲಕ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಅವರು ವಿವಾದ ಸೃಷ್ಟಿಸಿದ್ದಾರೆ.
ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಸಮಾಜ ಕಾರ್ಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ 19ರ ಶಬಾನ್ನನ್ನು ‘ನೈಬ್ ಶಾಹಿ ಇಮಾಮ್’ (ಉಪ ಇಮಾಮ್) ಎಂದು ಹೆಸರಿಸುವ ಕಾರ್ಯಕ್ರಮ ನವೆಂಬರ್ 22ರಂದು ನಡೆಯಲಿದೆ. ದೆಹಲಿಯ ಚಾರಿತ್ರಿಕ ಜಾಮಾ ಮಸೀದಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿದೇಶದ ಕೆಲವು ಧಾರ್ಮಿಕ ನಾಯಕರೂ ಭಾಗವಹಿಸುವ ನಿರೀಕ್ಷೆ ಇದೆ.
‘ಭಾರತ ಮತ್ತು ವಿದೇಶಗಳ ಹಲವು ರಾಜಕೀಯ ನಾಯಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಆಹ್ವಾನ ನೀಡಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿಲ್ಲ. ಗುಜರಾತ್ ಗಲಭೆಗಳಿಗೆ ಸಂಬಂಧಿಸಿ ಮುಸ್ಲಿಮರು ಮೋದಿ ಅವರನ್ನು ಕ್ಷಮಿಸಿಲ್ಲ. ಹಾಗಾಗಿ ಆಹ್ವಾನ ನೀಡಿಲ್ಲ’ ಎಂದು ಬುಖಾರಿ ಹೇಳಿದ್ದಾರೆ. ಮೋದಿ ಅವರನ್ನು ಆಹ್ವಾನಿಸದಿರುವ ನಿರ್ಧಾರವನ್ನು ಬುಖಾರಿ ಅವರು ಸಮರ್ಥಿಸಿಕೊಂಡಿದ್ದಾರೆ. ‘ಇದು ವೈಯಕ್ತಿಕ ಸಂಘರ್ಷ ಏನಲ್ಲ. ನಾವು ಅವರಿಗೆ ಇಷ್ಟ ಇಲ್ಲ. ಹಾಗಾಗಿ ನಮಗೂ ಅವರು ಇಷ್ಟ ಇಲ್ಲ. ಮುಸ್ಲಿಮರ ಹತ್ತಿರ ಬರುವ ಪ್ರಯತ್ನವನ್ನು ಮೋದಿ ಅವರು ಮಾಡಿಲ್ಲ’ ಎಂದು ಬುಖಾರಿ ಹೇಳಿದ್ದಾರೆ.
ಬಿಜೆಪಿ ಖಂಡನೆ: ಬುಖಾರಿ ಅವರ ನಿಲುವನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಈ ನಿರ್ಧಾರ ದುರದೃಷ್ಟಕರ ಎಂದಿರುವ ಬಿಜೆಪಿ, ಈ ಮೂಲಕ ಅವರು ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದೆ. ಬಿಜೆಪಿ ಮುಖಂಡರಾದ ರಾಜನಾಥ್ ಸಿಂಗ್, ಹರ್ಷವರ್ಧನ್, ಸಯ್ಯದ್ ಷಾನವಾಜ್ ಹುಸೇನ್ ಮತ್ತು ವಿಜಯ ಗೋಯಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ.