ಗುವಾಹಟಿ (ಪಿಟಿಐ): ಅಸ್ಸಾಂ ರಾಜ್ಯದ ಸೋನಿತ್ಪುರ ಮತ್ತು ಕೊಕ್ರಝಾರ್ ಜಿಲ್ಲೆಗಳ ನಾಲ್ಕು ಸ್ಥಳಗಳಲ್ಲಿ ಮಂಗಳವಾರ ರಾತ್ರಿ ಶಂಕಿತ ಬೊಡೊ ಉಗ್ರಗಾಮಿಗಳು ಸರಣಿ ದಾಳಿ ನಡೆಸಿ, ಮುಖ್ಯವಾಗಿ ನಾಲ್ವರು ಮಹಿಳೆಯರು ಸೇರಿದಂತೆ ಬುಡಕಟ್ಟು ವರ್ಗಗಳ 37 ಜನರನ್ನು ಹತ್ಯೆ ಮಾಡಿದ್ದಾರೆ.
ಶಾಂತಿ ಮಾತುಕತೆಯನ್ನು ವಿರೋಧಿಸುತ್ತಿರುವ ಬೊಡೊಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ (ಎನ್ಡಿಎಫ್ಬಿ) ಸಾಂಗ್ಬಿಜಿತ್ ಬಣಕ್ಕೆ ಸೇರಿದ ಭಾರಿ ಶಸ್ತ್ರಸಜ್ಜಿತ ಉಗ್ರರು ನಡೆಸಿದ ಈ ದಾಳಿಯಲ್ಲಿ ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಿತ್ಪುರ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಕೇಂದ್ರ ಸರ್ಕಾರ ಪರಿಸ್ಥಿತಿ ಅಲೋಕಿಸುತ್ತಿದ್ದು, ಸ್ಥಳಕ್ಕೆ ಅರೆಸೇನಾಪಡೆಗಳನ್ನು ಕಳುಹಿಸಿದೆ.
ಖಂಡನೆ: ಈ ಮಧ್ಯೆ, ನಿರಪರಾಧಿ ಜನರ ಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ. ‘ಇದೊಂದು ಹೇಡಿಗಳ ಕೃತ್ಯ’ ಎಂದು ಮೋದಿ ಟ್ವೀಟ್ ಮಾಡಿದ್ದು, ಅಸ್ಸಾಂಗೆ ಪ್ರಯಾಣ ಬೆಳೆಸಿರುವ ಸಿಂಗ್, ‘ನಿರಪರಾಧಿ ಜನರ ಹತ್ಯೆಯನ್ನು ಎಂದಿಗೂ ಸಮರ್ಥಿಸಲಾಗದು’ ಎಂದಿದ್ದಾರೆ. ಜತೆಗೆ ಇಬ್ಬರೂ ನಾಯಕರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರೊಂದಿಗೆ ಮಾತನಾಡಿ, ಘಟನೆಯ ವಿವರ ಪಡೆದಿದ್ದು, ರಾಜ್ಯ ಸರ್ಕಾರಕ್ಕೆ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.