ಭದ್ರೆವಾಹ/ ಜಮ್ಮು : ಜಮ್ಮು–ಕಾಶ್ಮೀರದ ಭದ್ರೆವಾಹ ಕಣಿವೆ ಪ್ರದೇಶದಲ್ಲಿ ಬುಧವಾರ ನಡೆದ ವ್ಯಕ್ತಿಯೊಬ್ಬರ ಕೊಲೆ ಯಿಂದಾಗಿ ಗುರುವಾರ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಅದರ ನಿಯಂತ್ರಣಕ್ಕೆ ಪೊಲೀಸರು ಕರ್ಫ್ಯೂ ಜಾರಿಗೊಳಿಸಿದ್ದಾರೆ.
ನಯೀಂ ಎಂಬುವರು ಕೊಲೆಯಾದ ವ್ಯಕ್ತಿ. ಗೋರಕ್ಷಕರು ಎಂದು ಹೇಳಿಕೊಂಡವರು ಗುಂಡಿಕ್ಕಿ ನಯೀಂ ಅವರನ್ನು ಕೊಂದಿದ್ದಾರೆ ಎಂದು ಸಂಬಂಧಿಕರು ದೂರಿದ್ದರು.
ನಯೀಂ ಸಂಬಂಧಿಕರ ಗುಂಪು ಬುಧವಾರ ಭದ್ರೆವಾಹ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಐದು ವಾಹನಗಳನ್ನು ಜಖಂಗೊಳಿಸಿದ್ದರು. ಅಲ್ಲದೆ ಮೂರು ಚಕ್ರದ ವಾಹನವೊಂದನ್ನು ಸುಟ್ಟು ಹಾಕಿದ್ದರು. ಇದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಲಾಠಿ ಮತ್ತು ಟಿಯರ್ ಗ್ಯಾಸ್ ಬಳಸಿ ಉದ್ರಿಕ್ತರ ಗುಂಪನ್ನು ಚದುರಿಸಿದ್ದರು.
‘ಭದ್ರೆವಾಹದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಯೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಇತರ ಏಳು ಜನರನ್ನು ಪ್ರಶ್ನಿಸಲಾಗುತ್ತಿದೆ’ ಎಂದು ಜಮ್ಮು ವಲಯದ ಐಜಿಪಿ ಎಂ.ಕೆ.ಸಿನ್ಹಾ ಪ್ರತಿಕ್ರಿಯಸಿದ್ದಾರೆ.
ಕೋಮು ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಭದ್ರೆವಾಹದಲ್ಲಿ ಈ ಘಟನೆ ಬಳಿಕ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.