ಪುಣೆ: ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಹಿಂಸಾಚಾರದ ಪ್ರತ್ಯಕ್ಷದರ್ಶಿಯಾಗಿದ್ದ 19 ಹರೆಯದ ದಲಿತ ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾಳೆ. ಈಕೆಯ ಶವ ಭಾನುವಾರದಂದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಜನವರಿ ತಿಂಗಳಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ವೇಳೆ ಪೂಜಾ ಸಾಕತ್ ಎಂಬ ದಲಿತ ಯುವತಿಯ ಮನೆಗೆ ಬೆಂಕಿ ಹಚ್ಚಲಾಗಿತ್ತು. ಈ ಕೃತ್ಯವನ್ನು ಪೂಜಾ ಕಣ್ಣಾರೆ ಕಂಡಿದ್ದು, ದುಷ್ಕರ್ಮಿಗಳ ವಿರುದ್ದ ದೂರು ನೀಡಿದ್ದಳು.
ಮನೆಗೆ ಬೆಂಕಿ ಹಚ್ಚಿದ ಆರೋಪಿಗಳ ವಿರುದ್ಧ ಹೇಳಿಕೆ ನೀಡದಂತೆ ಪೂಜಾ ಮೇಲೆ ಒತ್ತಡ ಹೇರಲಾಗಿತ್ತು. ಪೊಲೀಸರಿಗೆ ನೀಡಿದ ದೂರು ವಾಪಸ್ ಪಡೆಯುವಂತೆ ಅಲ್ಲಿನ ಸ್ಥಳೀಯರು ಆಕೆಗೆ ಬೆದರಿಕೆಯೊಡ್ಡುತ್ತಿದ್ದರು ಎಂದು ಆಕೆಯ ಕುಟುಂಬ ಆರೋಪಿಸಿದೆ.
ಆದಾಗ್ಯೂ, ಪೂಜಾ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಪೂಜಾ ಕಳೆದ ಶುಕ್ರವಾರ ನಾಪತ್ತೆಯಾಗಿದ್ದು, ಭಾನುವಾರ ಬೆಳಗ್ಗೆ ಆಕೆಯ ಶವ ಭೀಮಾ ಕೋರೆಗಾಂವ್ ಹಿಂಸಾಚಾರದ ನಿರಾಶ್ರಿತರ ಶಿಬಿರದ ಬಳಿ ಪತ್ತೆಯಾಗಿತ್ತು.