ಮುಂಬೈ, (ಪಿಟಿಐ): `ಬ್ರಹ್ಮಪುತ್ರ ನದಿಯ ಹಾಡುಕವಿ~, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕ ಭೂಪೇನ್ ಹಜಾರಿಕಾ ಅವರು ಶನಿವಾರ ನಿಧನರಾದರು.
ವಿಶಿಷ್ಟ ಧ್ವನಿ ಮಾಧುರ್ಯ, ಮಾಂತ್ರಿಕ ಸಂಗೀತದ ಮೂಲಕ ಅಸ್ಸಾಂನ ಶ್ರೀಮಂತ ಜನಪದ ಹಾಗೂ ಸಾಂಪ್ರದಾಯಿಕ ಸಾಹಿತ್ಯದ ಸೊಗಡನ್ನು ಜನಪ್ರಿಯಗೊಳಿಸಿದ ಹಿರಿಮೆ ಹಜಾರಿಕಾ ಅವರಿಗೆ ಸಲ್ಲುತ್ತದೆ.
86 ವರ್ಷದ ಭೂಪೇನ್, ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಜೂನ್ 29ರಂದು ಇಲ್ಲಿಯ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಹಾಸಿಗೆಯಲ್ಲಿಯೇ 4ತಿಂಗಳು ಕಳೆದ ಅವರು ಕೊನೆಯವರೆಗೂ ಚೇತರಿಸಿಕೊಳ್ಳಲೇ ಇಲ್ಲ. ನ್ಯೂಮೋನಿಯಾ ಮತ್ತು ಅಂಗಾಂಗಗಳ ವೈಫಲ್ಯದಿಂದ ಶನಿವಾರ ಮಧ್ಯಾಹ್ನ ಸುಮಾರು 4.30 ಗಂಟೆಗೆ ಹಜಾರಿಕಾ ಕೊನೆಯುಸಿರೆಳೆದರು.
ಸೆಪ್ಟೆಂಬರ್8ರಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಯೇ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದ ಅವರ ಕೋರಿಕೆಯ ಮೇಲೆ ಅಭಿಮಾನಿಗಳು ಮೆಚ್ಚಿನ ಹಾಡುಗಳನ್ನು ಹೇಳಿದ್ದರು. ನ್ಯೂಮೋನಿಯಾ ಸೋಂಕಿಗೆ ಒಳಗಾದ ನಂತರ ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಾ ಹೋಯಿತು. ಶಸ್ತ್ರಚಿಕಿತ್ಸೆಯ ನಂತರ ಡಯಾಲಿಸಿಸ್ ಮತ್ತು ಜೀವ ರಕ್ಷಕ ವ್ಯವಸ್ಥೆಯ ಮೇಲೆ ಅವರು ಬದುಕಿದ್ದರು. ಕೊನೆ, ಕೊನೆಗೆ ಚೈತನ್ಯ ಕಳೆದುಕೊಂಡಿದ್ದ ಅವರಿಗೆ ನಳಿಕೆಯ ಮೂಲಕ ಔಷಧ, ಆಹಾರ ನೀಡಲಾಗುತಿತ್ತು.
ಕೀನ್ಯಾದಲ್ಲಿ ಹುಟ್ಟಿದ ಪ್ರಿಯಂ ಅವರನ್ನು ವಿವಾಹವಾಗಿದ್ದ ಹಜಾರಿಕಾ ಅವರಿಗೆ ತೇಜ್ ಹಜಾರಿಕಾ ಎಂಬ ಪುತ್ರ ಇದ್ದಾರೆ. ಪ್ರಿಯಂ ಅವರಿಂದ ವಿಚ್ಛೇದನ ಪಡೆದ ಬಳಿಕ ಸುಮಾರು ಮೂರುದಶಕಳಿಂದ ಭೂಪೇನ್ ಕಲ್ಪನಾ ಲಜ್ಮಿ ಅವರೊಂದಿಗೆ ಇದ್ದರು.
ಹಜಾರಿಕಾ ನಿಧನಕ್ಕೆ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ವಾಜಪೇಯಿ ಶೋಕ ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ರಾಯಭಾರಿಯಂತಿದ್ದ ಹಜಾರಿಕಾ `ಬ್ರಹ್ಮಪುತ್ರ ನದಿಯ ಕವಿ~ ಎಂದು ಪ್ರಸಿದ್ಧರಾಗಿದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.