ಅಲಹಾಬಾದ್ (ಪಿಟಿಐ): ಹಿಂದುಗಳ ಅತ್ಯಂತ ಪವಿತ್ರವಾದ ಧಾರ್ಮಿಕ ಸಮಾವೇಶ ಮಹಾಕುಂಭ ಮೇಳವು ಮಕರ ಸಂಕ್ರಾಂತಿಯ ಶುಭದಿನವಾದ ಸೋಮವಾರ ಬೆಳಿಗ್ಗೆ ಆರಂಭವಾಯಿತು. ಯತಿಗಳು, ಧಾರ್ಮಿಕ ನಾಯಕರು, ನಾಗಸಾಧುಗಳು ಸೇರಿದಂತೆ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರು ಭಕ್ತರು ಈ ಪವಿತ್ರ ಮೇಳದ ಆರಂಭಕ್ಕೆ ಸಾಕ್ಷಿಯಾದರು.
ಹರಿದ್ವಾರ (ಗಂಗಾ ನದಿ), ನಾಸಿಕ್ (ಗೋದಾವರಿ), ಉಜ್ಜೈನ (ಕ್ಷಿಪ್ರಾ) ಮತ್ತು ಅಲಹಾಬಾದ್ನ ಪ್ರಯಾಗ್ನಲ್ಲಿ -ಗಂಗಾ, ಯಮುನಾ ಮತ್ತು ಪುರಾಣಗಳಲ್ಲಿ ಉಲ್ಲೇಖ ಇರುವ ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳದಲ್ಲಿ ಈ ಕುಂಭ ಮೇಳಕ್ಕೆ ಚಾಲನೆ ದೊರೆಯಿತು.
ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಭಾನುವಾರದಿಂದಲೇ ದೇಶದ ವಿವಿಧೆಡೆಯಿಂದ ಲಕ್ಷಾಂತರು ಭಕ್ತರು ಆಗಮಿಸಿದ್ದು, ತ್ರಿವೇಣಿ ಸಂಗಮ ಸ್ಥಳವು ಬಾರಿ ಜನದಟ್ಟಣೆಯಿಂದ ಕೂಡಿದೆ.
ಮುಂಜಾಗ್ರತ ಕ್ರಮವಾಗಿ ಈಗಾಗಲೇ ಸೂಕ್ತ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ತ್ರೀವೇಣಿ ಸಂಗಮ ಸ್ಥಳಕ್ಕೆ ಆಗಮಿಸುವ ವಾಹನಗಳನ್ನು ನಿನ್ನೆಯಿಂದಲೇ ತಡೆಯಿಡಿಯಲಾಗಿದೆ ಎಂದು ಪೊಲೀಸ್ ಭದ್ರತಾ ಮೂಲಗಳು ತಿಳಿಸಿವೆ.
ಈ ಕುಂಭ ಮೇಳವು ಇಂದಿನಿಂದ 55 ದಿನಗಳ ಕಾಲ ನಡೆಯಲಿದ್ದು, ಮಹಾಶಿವರಾತ್ರಿಗೆ (ಮಾರ್ಚ್ 10) ಕೊನೆಗೊಳ್ಳಲಿದೆ.