ನವದೆಹಲಿ (ಐಎಎನ್ಎಸ್): ): ನಾಲ್ವರು ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿರುವ ಕೋರ್ಟ್ ತೀರ್ಪು, ಇನ್ನು ಇಂತಹ ಅಪರಾಧ ತಡೆಯಲು ನೆರವಾಗುತ್ತದೆ ಎಂದು ಹಲವು ನಾಯಕಿಯರು ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಸ್ವಾಗತಿಸಿದ್ದಾರೆ.
‘ಕೋರ್ಟ್ನ ತೀರ್ಪು ಸ್ವಾಗತಾರ್ಹ. ಇದು ಅತ್ಯಾಚಾರ ದಂತಹ ಅಪರಾಧಗಳನ್ನು ತಡೆಯಲು ನೆರವಿಗೆ ಬರುತ್ತದೆ’ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
‘ಇದೊಂದು ಐತಿಹಾಸಿಕ ತೀರ್ಪು ಮತ್ತು ನ್ಯಾಯಾಲಯದ ಅತ್ಯುತ್ತಮ ನಿರ್ಧಾರವಾಗಿದೆ. ನಾಲ್ವರು ತಪ್ಪಿತಸ್ಥರಿಗೂ ಮರಣ ದಂಡನೆ ವಿಧಿಸುವ ಮೂಲಕ ನ್ಯಾಯಾಲಯವು ಅಂತಹ ಅಪರಾಧಗಳನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ಕಳುಹಿಸಿದೆ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮ ಅಭಿಪ್ರಾಯಪಟ್ಟದ್ದಾರೆ.
‘ಪೋಷಕರು, ಶಿಕ್ಷಕರು ಹಾಗೂ ಸಮುದಾಯಕ್ಕೆ ಇದು ಸ್ಪಷ್ಟ ಸಂದೇಶವಾಗಿದೆ. ತಮ್ಮ ಹುಡುಗರಿಗೆ ಹೇಗೆ ನಡೆದುಕೊಳ್ಳಬೇಕು ಮತ್ತು ಜವಾಬ್ಬಾರಿಯಿಂದ ನಡೆಯದಿದ್ದರೆ ಗಲ್ಲಿಗೇರುವ ಎಚ್ಚರಿಕೆಯನ್ನು ನೀಡಲು ಅನುವಾಗಿದೆ’ ಎಂದು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ನುಡಿದಿದ್ದಾರೆ.
‘ಮರಣದಂಡನೆ ನೊಂದ ಯುವತಿಯ ಕುಟುಂಬಕ್ಕೆ ಸಮಾಧಾನ ತರುತ್ತದೆ. ಅಲ್ಲದೆ, ಮೃತಳಿಗೆ ನ್ಯಾಯ ದೊರಕಿಸುತ್ತದೆ. ಈ ಕಠಿಣ ಶಿಕ್ಷೆ ಮುಂದೆ ಇಂತಹ ಹೀನಕೃತ್ಯ ಪುನರಾವರ್ತನೆಯಾಗದಂತೆ ತಡೆಯುತ್ತದೆ. ಇದೊಂದು ದೊಡ್ಡಧ್ವನಿಯ ಸ್ಪಷ್ಟ ತೀರ್ಪು’ ಎಂದು ಸಾಮಾಜಿಕ ಸಂಶೋಧನಾ ಕೇಂದ್ರದ (ಸಿಆರ್ಎ) ನಿರ್ದೇಶಕಿ ರಂಜನಾ ಕುಮಾರಿ ಹೇಳಿದ್ದಾರೆ.
ಪರಿಹಾರವಲ್ಲ: ಈ ಮಧ್ಯೆ, ‘ಲೈಂಗಿಕ ಹಿಂಸಾಚಾರ ಪ್ರಕರಣಗಳಿಗೆ ಮರಣದಂಡನೆ ಪರಿಹಾರ ಆಗಲಾರದು’ ಎಂದು ಇತರ ಕೆಲವು ಕಾರ್ಯಕರ್ತೆಯರು ಪ್ರತಿಕ್ರಿಯಿಸಿದ್ದಾರೆ.
‘ಇದೊಂದು ಅಪರೂಪದ ಪ್ರಕರಣವಾದರೂ ಮರಣದಂಡನೆಯು ಪರಿಹಾರವಲ್ಲ ಅಥವಾ ಅಪರಾಧವನ್ನು ತಡೆಯುವುದಿಲ್ಲ. ನಾಲ್ವರು ಆರೋಪಿಗಳಿಗೆ ಸುಧಾರಣೆಯ ಅವಕಾಶ ಕೊಡಬಹುದು. ಮಹಿಳೆಯರ ವಿರುದ್ಧದ ಲೈಂಗಿಕ ಹಿಂಸಾಚಾರಕ್ಕೆ ಮೂಲ ಕಾರಣ ಏನೆಂಬುದನ್ನು ನೋಡುವ ಅವಶ್ಯಕತೆ ಇದೆ’ ಎಂದು ‘ಮಹಿಳೆಯರಿಗೆ ಮಾಹಿತಿ, ಪ್ರೇರಣೆ ಹಾಗೂ ಸಶಕ್ತಿ’ ನೀಡುವ ಸರ್ಕಾರೇತರ ‘ಜಾಗೋರಿ’ಸಂಸ್ಥೆಯ ಪ್ರತಿನಿಧಿ ಸುನಿತಾ ಧಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.