ನವದೆಹಲಿ (ಪಿಟಿಐ): ಲೋಕಮಾನ್ಯ ತಿಲಕ್ ಸ್ಥಾಪಿಸಿರುವ ಟ್ರಸ್ಟ್ ನೀಡುವ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಗೆ ‘ಮಲಯಾಳ ಮನೋರಮಾ’ ಪತ್ರಿಕೆಯ ಪ್ರಧಾನ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಾಮನ್ ಮ್ಯಾಥ್ಯೂ ಭಾಜನರಾಗಿದ್ದಾರೆ.
ಕೇಸರಿ ಮರಾಠಾ ಟ್ರಸ್ಟ್ ನೀಡುವ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪತ್ರಿಕೋದ್ಯಮ ಉತ್ಕೃಷ್ಟತಾ ಪ್ರಶಸ್ತಿಯನ್ನು ಮ್ಯಾಥ್ಯೂ ಅವರಿಗೆ ಜನವರಿ 4ರಂದು ನೀಡಲಾಗುವುದು.
ಟ್ರಸ್ಟ್ನ 133ನೇ ಸ್ಥಾಪನಾ ದಿನದಂದು ಪುಣೆಯ ತಿಲಕ್ವಾಡಾದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿರುವ ಅಪ್ರತಿಮ ಸೇವೆಗಾಗಿ ಮಾಮನ್ ಮ್ಯಾಥ್ಯೂರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಸರಿ ಸಂಪಾದಕ ಟ್ರಸ್ಟಿ ದೀಪಕ್ ತಿಲಕ್ ಹೇಳಿದ್ದಾರೆ.
ಮ್ಯಾಥ್ಯೂ ಅವರು 44 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ, ಭಾರತೀಯ ಸಂಪಾದಕರ ಸಂಘ, ಪತ್ರಿಕೆ ಮಾಲೀಕರ ಸಂಘಟನೆಯಾದ ಭಾರತೀಯ ವಾರ್ತಾ ಪತ್ರಿಕೆ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು.