ಚೆನ್ನೈ : ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವಂ ಬಣ ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ಶಶಿಕಲಾ ಮತ್ತು ದಿನಕರನ್ ಬಣಕ್ಕೆ ಹಿನ್ನಡೆಯಾಗಿದೆ.
ತಮ್ಮ ಹಾಗೂ ಪನ್ನೀರ್ಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣಗಳು ಒಂದಾಗಿರುವುದರಿಂದ ಪಕ್ಷದ ‘ಎರಡೆಲೆ’ ಚಿಹ್ನೆಯನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.
ಚುನಾವಣಾ ಆಯೋಗವು ಶೀಘ್ರವೇ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿರುವ ಪಳನಿಸ್ವಾಮಿ, ಇದು ಸ್ವಾಗತರ್ಹ ನಡೆ ಹಾಗೂ ಪಕ್ಷಕ್ಕೆ ಅತಿ ಹೆಚ್ಚು ಸಂತೋಷದಾಯಕ ಕ್ಷಣ ಎಂದಿದ್ದಾರೆ.
ಮುಖ್ಯಮಂತ್ರಿಗಳ ಹೇಳಿಕೆ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ಸಂಭ್ರಮಪಟ್ಟರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜೈಲಿನಲ್ಲಿರುವ ಹಾಗೂ ಇ.ಡಿ ವಿಚಾಚರಣೆ ಎದುರಿಸತ್ತಿರುವ ಪಕ್ಷದ ನಾಯಕಿ ಶಶಿಕಲಾ ಹಾಗೂ ಟಿ.ಟಿ.ವಿ ದಿನಕರನ್ ಅವರಿಗೆ ಚುನಾವಣಾ ಆಯೋಗದ ಈ ನಿರ್ಧಾರದಿಂದ ಹಿನ್ನಡೆ ಆದಂತಾಗಿದೆ.
ಚಿಹ್ನೆ ಪಡೆಯುವ ಸಂಬಂಧ ಆಯೋಗಕ್ಕೆ ಸಮರ್ಪಕ ದಾಖಲೆಗಳನ್ನು ನೀಡಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.