ಧಾರವಾಡ: ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್ ಅನುಮತಿ ಮೇರೆಗೆ ಮಂಗಳವಾರ ಧಾರವಾಡಕ್ಕೆ ಪ್ರವೇಶಿಸಿ ಮತ ಚಲಾಯಿಸಿದರು.
ನಗರದ ಸಪ್ತಾಪುರದ ಶಾರದಾ ಪದವಿಪೂರ್ವ ವಿದ್ಯಾಲಯದ ಮತಗಟ್ಟೆ 75ರಲ್ಲಿ ಅವರು ಮತ ಚಲಾಯಿಸಿದರು. ಸಂಜೆ 5.40ರ ಹೊತ್ತಿಗೆ ಬಂದು ಮತ ಹಾಕಿದರು. ಮತ ಚಲಾಯಿಸಿದ ನಂತರ ವಾಪಸ್ ತೆರಳಿದರು. ಪತ್ನಿ ಶಿವಲೀಲಾ ಮತ್ತು ಪುತ್ರ ವೈಶಾಲಿ ಮತದಾನ ಕೇಂದ್ರಕ್ಕೆ ಬಂದಿದ್ಚರು.
ಶಾರದಾ ವಿದ್ಯಾಲಯದ ಮುಂಭಾಗದ ರಸ್ತೆಯಲ್ಲಿ ವಿನಯ ಕುಲಕರ್ಣಿ ಅಭಿಮಾನಿಗಳು ಜಮಾಯಿಸಿದ್ದರು. ಹಲವರು ವಿನಯ ಅವರಿಗೆ ಹೂವಿನ ಹಾರ ಹಾಕಿದರು. ಜೈಕಾರ ಕೂಗಿದರು.
ಶಾರದಾ ವಿದ್ಯಾಲಯದ ಆವರಣ ಪ್ರವೇಶ ದ್ವಾರದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಅಭಿಮಾನಿಗಳು ಮತದಾನ ಕೇಂದ್ರ ಆವರಣಕ್ಕೆ ಭಾಗಕ್ಕೆ ಪ್ರವೇಶಿಸದಂತೆ ಪೊಲಿಸರು ನಿಗಾ ವಹಿಸಿದ್ದರು. ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಸ್ಥಳದಲ್ಲಿಇದ್ದರು.
ಶಾಸಕ ವಿನಯ ಕುಲಕರ್ಣಿ ಅವರು ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ವಿನಯ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಇದೆ.