ಸೋಮವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಮತ್ತು ಅದೇ ಸಂದರ್ಭದಲ್ಲಿ ಚೆನ್ನೈನಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರಮಾಣ ವಚನ ಸಮಾರಂಭಕ್ಕೆ ರಾಜಪಕ್ಸೆ ಹಾಜರಾದರೆ ಸಮಾರಂಭದ ಪಾವಿತ್ರ್ಯ ಹಾಳಾಗುತ್ತದೆ ಎಂದು ವೈಕೊ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ನಿಯೋಜಿತ ಪ್ರಧಾನಿ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ್ದ ವೈಕೊ ಆಕ್ಷೇಪ ವ್ಯಕ್ತಪಡಿಸಿದ್ದರು.
‘ಶ್ರೀಲಂಕಾದಲ್ಲಿಯ ಮಾನವ ಹಕ್ಕು ಉಲ್ಲಂಘನೆ ವಿರುದ್ಧದ ವಿಶ್ವಸಂಸ್ಥೆಯ ಗೊತ್ತುವಳಿ ಮಂಡನೆ ಸಂದರ್ಭದಲ್ಲಿ ಭಾರತ ಗೈರು ಹಾಜರಾಗಲು ಪಟ್ಟಭದ್ರ ಅಧಿಕಾರಿಗಳ ಕುಮ್ಮಕ್ಕೇ ಕಾರಣ’ ಎಂದು ಹೇಳಿರುವ ವೈಕೊ, ‘ಈಗಲೂ ರಾಜಪಕ್ಸೆ ಅವರಿಗೆ ಆಮಂತ್ರಣ ನೀಡುವ ಹಿಂದೆ ಈ ಅಧಿಕಾರಿಗಳೇ ಕೆಲಸ ಮಾಡಿದ್ದು, ಮೋದಿ ಅವರನ್ನು ದಾರಿ ತಪ್ಪಿಸಿದ್ದಾರೆ’ ಎಂದು ಆಪಾದಿಸಿದ್ದಾರೆ.