ಲಖನೌ (ಐಎಎನ್ಎಸ್): ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ.
`ಭ್ರಷ್ಟಾಚಾರದಲ್ಲಿ ವಾದ್ರಾ ಭಾಗಿದಾರಿಕೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ನಾನು ಈಗ ಬಹಿರಂಗಪಡಿಸಲಾರೆ~ ಎಂದು ಲಖನೌದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಯಾವ ರೀತಿಯ ಹಗರಣದಲ್ಲಿ ವಾದ್ರಾ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿರುವ ಸ್ವಾಮಿ, `ಭ್ರಷ್ಟರ ಮುಖವಾಡವನ್ನು ನಾನು ಬಯಲು ಮಾಡಲು ಯತ್ನಿಸಿದಾಗಲೆಲ್ಲಾ ನನ್ನ ಪ್ರಾಮಾಣಿಕತೆಯನ್ನು ಪಶ್ನೆ ಮಾಡಲಾಗುತ್ತದೆ~ ಎಂದರು.
`2ಜಿ ಹಗರಣದಲ್ಲಿ ಎ.ರಾಜಾ ಅವರ ಪಾತ್ರವನ್ನು ನಾನು ಬಹಿರಂಗ ಪಡಿಸಿದಾಗ ವಿರೋಧಿಗಳೆಲ್ಲಾ ನಾನು ದಲಿತ ವಿರೋಧಿ ಅಂದರು. ಅದೇ ಹಗರಣಕ್ಕೆ ಸಂಬಂಧಿಸಿದಂತೆ ಕನಿಮೊಳಿ ಬಂಧನವಾದಾಗ, ಆಕೆ ಮಹಿಳೆಯಾದ್ದರಿಂದ ಹಾಗೂ ನಾನು ಮಹಿಳೆಯರನ್ನು ವಿರೋಧಿಸುವುದರಿಂದ ಕನಿಮೊಳಿ ವಿರುದ್ಧ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು. ಆ ಆರೋಪಗಳೆಲ್ಲಾ ಆಧಾರ ರಹಿತ. ನಾನು ಯಾವಾಗಲೂ ಸ್ವತಃ ದಾಖಲೆಗಳನ್ನು ಕಲೆ ಹಾಕಿ ಮಾಡಿರುವ ಆರೋಪಗಳನ್ನು ಸಮರ್ಥಸುವವನು~ ಎಂದು ವಿವರಿಸಿದರು.
`2 ಜಿ ಹಗರಣದಲ್ಲಿ ಪಿ ಚಿದಂಬರಂ ಅವರ ಪಾತ್ರವೂ ಇದೆ ಎಂಬುದಕ್ಕೆ ದಾಖಲೆಗಳಿವೆ. ಆದರೆ ಅವರನ್ನು ಈ ಪ್ರಕರಣದಲ್ಲಿ ಸಹ-ಆರೋಪಿಯನ್ನಾಗಿ ಪರಿಗಣಿಸಲಾಗಿಲ್ಲ. ಈ ಪ್ರಕರಣದಲ್ಲಿ ಅವರನ್ನೂ ಕೂಡ ಸಹ-ಆರೋಪಿಯನ್ನಾಗಿ ಮಾಡುವುದಕ್ಕೆ ನಾನು ಪ್ರಯತ್ನಿಸುವೆ~ ಎಂದು ಸ್ವಾಮಿ ಹೇಳಿದರು.
ಮುಂಬರುವ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಪಕ್ಷ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
`ಈ ವಿಚಾರವಾಗಿ ಇನ್ನು ಬಿಜೆಪಿಯು ನಿರ್ಧರಿಸಬೇಕು~ ಎಂದು ಸ್ವಾಮಿ ತಿಳಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.