ನವದೆಹಲಿ (ಪಿಟಿಐ): ಯುಪಿಎ ಸರ್ಕಾರವು ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ ಲೋಕಪಾಲರನ್ನು ನೇಮಕ ಮಾಡಲು ತರಾತುರಿಯಲ್ಲಿ ನಡೆಸುತ್ತಿರುವ ಯತ್ನಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಒಂದೊಮ್ಮೆ ಸರ್ಕಾರವು ಆತುರಾತುರದಲ್ಲಿ ಲೋಕಪಾಲರ ನೇಮಕಾತಿ ಮಾಡಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆಯಷ್ಟೇ ಆಗದೆ ಅತ್ಯಂತ ಅನುಚಿತ ರಾಜಕೀಯ ನಿರ್ಧಾರವೂ ಆಗುತ್ತದೆ ಎಂದರು. ಲೋಕಪಾಲರ ನೇಮಕಾತಿಗೆ ನಡೆಸುತ್ತಿರುವ ವಿಧಿವಿಧಾನದ ಕಾನೂನುಬದ್ಧತೆಯ ಬಗ್ಗೆ ಸಂಶಯಗಳಿವೆ. ಜತೆಗೆ, ಇಂತಹ ಆತುರದ ನೇಮಕಾತಿಯು ಲೋಕಪಾಲ ವ್ಯವಸ್ಥೆ ಬಗೆಗಿನ ವಿಶ್ವಾಸಾರ್ಹತೆಯನ್ನು ಅದು ಅನುಷ್ಠಾನಕ್ಕೆ ಬರುವ ಮುನ್ನವೇ ನಾಶಗೊಳಿಸುತ್ತದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಏ.27 ಅಥವಾ 28ರಂದು ಲೋಕಪಾಲ ಆಯ್ಕೆ ಸಮಿತಿಯ ಸಭೆ ನಡೆಸಲು ಉದ್ದೇಶಿಸಿದ್ದಾರೆ ಎಂಬ ವರದಿಗಳಿಂದಾಗಿ ಜೇಟ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಈಗ ಚುನಾವಣಾ ಪ್ರಕ್ರಿಯೆ ಅರ್ಧದಷ್ಟು ಮುಗಿದಿದ್ದು ಫಲಿತಾಂಶ ಹೊರಬೀಳಲು 26 ದಿವಸಗಳಷ್ಟೇ ಬಾಕಿ ಇದೆ. ಅಧಿಕಾರದಿಂದ ಕೆಳಕ್ಕಿಳಿಯುವುದು ನಿಶ್ಚಿತವಾಗಿರುವ ಈ ಹಂತದಲ್ಲಿ ತರಾತುರಿಯಲ್ಲಿ ಲೋಕಪಾಲರ ನೇಮಕ ಸರಿಯಲ್ಲ ಎಂದಿದ್ದಾರೆ.
‘ಈಗಾಗಲೇ ವಿಶ್ವಾಸಾರ್ಹತೆ ಕಳೆದುಕೊಂಡಿರುವ ಪ್ರಧಾನಿಯವರಿಗೆ ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲ’ ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.
ತಾವು ಏನನ್ನು ಮಾಡಲು ಹೊರಟಿದ್ದೇನೆಂಬ ಬಗ್ಗೆ ಪ್ರಧಾನಿಯವರು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಲೋಕಪಾಲರನ್ನು ನೇಮಿಸಿದರೆ ಅವರು ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ ಎಂದಿದ್ದಾರೆ.