ತಾಸಗಾಂವ್/ಮಹಾರಾಷ್ಟ್ರ (ಪಿಟಿಐ): ಬಿಜೆಪಿಯ ಸಖ್ಯ ತೊರೆದ ಶಿವಸೇನಾ ವಿರುದ್ಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಒಂದೇ ಒಂದು ಶಬ್ದವನ್ನೂ ಮಾತನಾಡದಿರಲು ಶಪಥ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಮೇಲಿನ ಗೌರವ ಮತ್ತು ಅಭಿಮಾನದಿಂದ ಈ ಸ್ವಯಂ ನಿಯಂತ್ರಣ ಹೇರಿಕೊಂಡಿರುವುದಾಗಿ ಅವರು ಸಮಜಾಯಿಷಿ ನೀಡಿದ್ದಾರೆ. ಸಾಂಗ್ಲಿಯ ತಾಸಗಾಂವ್ನಲ್ಲಿ ಭಾನುವಾರ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮರಾಠಿಯಲ್ಲಿ ಮಾತು ಆರಂಭಿಸಿದ ಮೋದಿ, ತಮ್ಮ ಎಂದಿನ ಶೈಲಿಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ಮೋದಿ ಏಕೆ ತಮ್ಮ ಚುನಾವಣಾ ಭಾಷಣಗಳಲ್ಲಿ ಶಿವಸೇನಾವನ್ನು ಟೀಕಿಸುತ್ತಿಲ್ಲ ಎನ್ನುವುದು ರಾಜಕೀಯ ಪಂಡಿತರಿಗೆ ಆಶ್ಚರ್ಯವಾಗಿರಬಹುದು. ಶಿವಸೇನಾ ವಿರುದ್ಧ ನಾನು ಮಾತನಾಡದಿರುವುದು ಬಾಳಾ ಠಾಕ್ರೆ ಅವರಿಗೆ ಸಲ್ಲಿಸುತ್ತಿರುವ ಗೌರವ’ ಎಂದರು.
‘ಬಾಳಾ ಠಾಕ್ರೆ ಅವರ ಬಗ್ಗೆ ನನಗೆ ಅಪಾರ ಗೌರವ, ಅಭಿಮಾನವಿದೆ. ಅವರಿಲ್ಲದ ಮೊದಲ ಚುನಾವಣೆ ಇದು. ಕೆಲವು ಸಂಗತಿಗಳು ರಾಜಕೀಯವನ್ನೂ ಮೀರಿರುತ್ತವೆ. ಹೀಗಾಗಿ ಎಲ್ಲವನ್ನೂ ರಾಜಕೀಯಕ್ಕೆ ತಳುಕು ಹಾಕುವುದು ಸರಿಯಲ್ಲ’ ಎಂದು ವಿವರಿಸಿದರು.
‘60 ವರ್ಷಗಳಿಂದ ಈ ದೇಶವನ್ನು ಆಳಿದ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ತಾನು ಮಾಡಿದ್ದಾದರೂ ಏನು ಎಂಬ ಬಗ್ಗೆ ಇದುವರೆಗೂ ಲೆಕ್ಕ ಕೊಟ್ಟಿಲ್ಲ. ಅಧಿಕಾರಕ್ಕೆ ಬಂದು 60 ದಿನಗಳಾಗಿರುವ ನಮ್ಮಿಂದ ಕಾಂಗ್ರೆಸ್ ಉತ್ತರ ಬಯಸುತ್ತಿದೆ’ ಎಂದರು.
ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಅವಳಿಗಳಿದ್ದಂತೆ. ದೇಶಕ್ಕಾಗಿ ಹುತಾತ್ಮರಾದ ಕಾರ್ಗಿಲ್ ಯೋಧರ ವಿಧವಾ ಪತ್ನಿಯರಿಗೆ ನೀಡಿದ ಮನೆಗಳನ್ನು ಎರಡೂ ಪಕ್ಷಗಳು ಕಿತ್ತುಕೊಂಡಿವೆ ಎಂದು ಆರೋಪಿಸಿದರು.