ನವದೆಹಲಿ(ಪಿಟಿಐ): ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸಿದ ಮಾತ್ರಕ್ಕೆ ಚುನಾವಣೆಯೊಂದನ್ನು ಅನೂರ್ಜಿತಗೊಳಿಸಲಾಗದು ಎಂದು ಬುಧವಾರ ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ತನ್ನ ಇಬ್ಬರು ಪತ್ನಿಯರು, ಮಕ್ಕಳು ಹಾಗೂ ಅವರ ಆಸ್ತಿಗಳನ್ನು ಪ್ರಕಟಿಸದೆ ಮರೆಮಾಚಿದ ಜೆಡಿಯು ಸಂಸದ ಮಂಗನಿಲಾಲ್ ಮಂಡಲ್ ಅವರನ್ನು ಅನರ್ಹಗೊಳಿಸಿದ ಪಟ್ನಾ ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿದೆ.
ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಸ್.ಜೆ. ಮುಖೋಪಾಧ್ಯಾಯ ಅವರನ್ನೊಳಗೊಂಡ ನ್ಯಾಯಪೀಠವು, `ದೂರುದಾರರು ನಿರ್ದಿಷ್ಟವಾಗಿ ಚುನಾವಣಾ ಅರ್ಜಿಯಲ್ಲಿ ಅಭ್ಯರ್ಥಿಯು ಮಾಹಿತಿ ಮರೆಮಾಚಿದ್ದರಿಂದ ಚುನಾವಣಾ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರಿರುವುದಾಗಿ ದೂರದ ಹೊರತು ಚುನಾಯಿತ ಪ್ರತಿನಿಧಿಯನ್ನು ಅನರ್ಹಗೊಳಿಸಲಾಗದು~ ಎಂದು ಸ್ಪಷ್ಟಪಡಿಸಿತು.