ಲಖನೌ (ಪಿಟಿಐ): ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ನಡೆಸುತ್ತಿರುವ ಜಾಕೀರ್ ಹುಸೇನ್ ಸ್ಮಾರಕ ಪ್ರತಿಷ್ಠಾನದ ಅವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ಹಾಜರುಪಡಿಸಲು ಸುದ್ದಿವಾಹಿನಿವೊಂದಕ್ಕೆ ಅಲಹಾಬಾದ್ ಹೈಕೋರ್ಟ್ ಗುರುವಾರ ಸೂಚಿಸಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ನೂತನ್ ಠಾಕೂರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಉಮಾನಾಥ್ ಸಿಂಗ್ ಹಾಗೂ ನ್ಯಾಯಮೂರ್ತಿ ಸತೀಶ್ ಚಂದ್ರ ಅವರಿದ್ದ ವಿಭಾಗೀಯ ಪೀಠವು ಜಾಕೀರ್ ಹುಸೇನ್ ಸ್ಮಾರಕ ಪ್ರತಿಷ್ಠಾನ ನಡೆಸಿದೆ ಎನ್ನಲಾದ ಅವ್ಯವಹಾರಗಳನ್ನು ಪ್ರಸಾರ ಮಾಡಿದ ಸುದ್ದಿವಾಹಿನಿವೊಂದಕ್ಕೆ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅರ್ಜಿದಾರರು ಸಲ್ಮಾನ್ ಖುರ್ಷಿದ್ ನಡೆಸುತ್ತಿರುವ ಜಾಕೀರ್ ಹುಸೇನ್ ಸ್ಮಾರಕ ಪ್ರತಿಷ್ಠಾನದ ಅವ್ಯವಹಾರಗಳನ್ನು ಪ್ರಥಮ ಮಾಹಿತಿ ವರದಿ ದಾಖಲಿಸಿ ತನಿಖೆಗೆ ಆದೇಶ ನೀಡಬೇಕೆಂದು ಕೋರಿದ್ದಾರೆ.