ನವದೆಹಲಿ (ಪಿಟಿಐ): ಇತ್ತೀಚೆಗೆ ಹೊರಡಿಸಿದ ಸುಗ್ರೀವಾಜ್ಞೆಗಳಿಗೆ ಬಜೆಟ್ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ಸಂಬಂಧ ವಿವಿಧ ಸಚಿವಾಲಯಗಳ ಉನ್ನತಾಧಿಕಾರಿಗಳು ಶುಕ್ರವಾರ ಸಭೆ ಸೇರಲಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವಾಲಯ ಕರೆದಿರುವ ಈ ಸಭೆಯಲ್ಲಿ ಗೃಹ, ಹಣಕಾಸು, ಕಾನೂನು, ಗ್ರಾಮೀಣಾಭಿವೃದ್ಧಿ, ಉಕ್ಕು ಮತ್ತು ಗಣಿ, ಕೃಷಿ, ಕಲ್ಲಿದ್ದಲು– ಭೂಸಾರಿಗೆ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು. ಎನ್ಡಿಎ ಸರ್ಕಾರವು ತನ್ನ ಏಳು ತಿಂಗಳ ಅಧಿಕಾರಾವಧಿಯಲ್ಲಿ ಎಂಟು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ.
ವಿಮೆ ಹಾಗೂ ಕಲ್ಲಿದ್ದಲು ಕ್ಷೇತ್ರಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗಳಿಗೆ ಅನುಮೋದನೆ ಪಡೆದುಕೊಳ್ಳುವುದಕ್ಕೆ ಸರ್ಕಾರದ ಮೇಲೆ ಭಾರಿ ಒತ್ತಡ ಇದೆ.
ಸಂಸತ್ ಅಧಿವೇಶನ ಶುರುವಾಗಿ ೪೨ ದಿನಗಳ ಒಳಗೆ ಸುಗ್ರೀವಾಜ್ಞೆಗೆ ಅನುಮೋದನೆ ಸಿಗಬೇಕು. ಇಲ್ಲದಿದ್ದರೆ ಅದು ರದ್ದಾಗುತ್ತದೆ.
ಸರ್ಕಾರವು ಹೊಸ ನೀತಿಗಳ ಜಾರಿಗಾಗಿ ಸುಗ್ರೀವಾಜ್ಞೆ ಮಾರ್ಗ ಹಿಡಿದಿರುವುದಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಜ.೨೦ರಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಹಿರಿಯ ಸಚಿವರ ಸಭೆ ಕರೆದಿದ್ದರು.