ಅಹಮದಾಬಾದ್ (ಪಿಟಿಐ): ಪತಿ ರಾಬರ್ಟ್ ವಾಧ್ರಾ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳ ಕುರಿತು ಪ್ರಿಯಾಂಕಾ ಗಾಂಧಿ ತಮ್ಮ ವಾಗ್ದಾಳಿ ತೀವ್ರಗೊಳಿಸಿರುವ ಸಂದರ್ಭದಲ್ಲಿಯೇ, ‘ನಾನು ಸೇಡಿನ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, ‘ಯಾರಾದರೂ ತಪ್ಪು ಮಾಡಿದಲ್ಲಿ ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ’ ಎಂದರು.
*ನೀವು ಅಧಿಕಾರಕ್ಕೆ ಬಂದರೆ ವಾಧ್ರಾ ಪ್ರಕರಣವನ್ನು ಯಾವ ರೀತಿ ನಿಭಾಯಿಸುತ್ತೀರಿ?
ಉ: ನಾನು ಪ್ರತೀಕಾರದ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ. ಕಳೆದ ಹತ್ತು ವರ್ಷಗಳಿಂದ ಸ್ವತಃ ನಾನೇ ಇದಕ್ಕೆ ಬಲಿಪಶುವಾಗಿದ್ದೇನೆ. ತಪ್ಪು ಮಾಡಿದ ವ್ಯಕ್ತಿಯ ವಿರುದ್ಧ ತೆಗೆದುಕೊಳ್ಳುವ ಕಾನೂನು ಕ್ರಮ ರಾಜಕೀಯ ಪ್ರೇರಿತವಾಗಿರಬಾರದು.
*ಪ್ರಿಯಾಂಕಾ ಗಾಂಧಿ ಟೀಕೆಗೆ ಏನು ಹೇಳುತ್ತೀರಿ?
ಉ: ಮಗಳಾಗಿ, ಸಹೋದರಿಯಾಗಿ ಅವರು ಸೋನಿಯಾ ಮತ್ತು ರಾಹುಲ್್ ಪರ ಪ್ರಚಾರ ಮಾಡುವ ಹಕ್ಕು ಹೊಂದಿದ್ದಾರೆ. ಮಗಳು ತನ್ನ ತಾಯಿಯನ್ನು ಸಮರ್ಥಿಸಿಕೊಳ್ಳುವುದು, ಸಹೋದರಿ ತನ್ನ ಸಹೋದರನನ್ನು ಬೆಂಬಲಿಸುವುದು ಸಹಜ ತಾನೆ?
* ‘‘ನಿಜವಾದ ಮೋದಿ’’ ಯಾರು– ದೃಢ ಸಂಕಲ್ಪದ ನಾಯಕನೇ ಅಥವಾ ವಿಭಜಕ ಮತ್ತು ಸರ್ವಾಧಿಕಾರಿ ಧೋರಣೆಯ ವ್ಯಕ್ತಿಯೇ?
ಉ: ‘ನನ್ನನ್ನು ಹತ್ತಿರದಿಂದ ಬಲ್ಲವರು ಹಾಗೂ ನನ್ನ ಜತೆ ಕೆಲಸ ಮಾಡಿದವರು ನಾನೊಬ್ಬ ದೃಢ ಸ್ವಭಾವದ ವ್ಯಕ್ತಿ ಎಂದು ನಂಬಿದ್ದಾರೆ. ನನ್ನನ್ನು ಹಣಿಯುವುದಕ್ಕೆ ವಿರೋಧಿಗಳಿಗೆ ಗಟ್ಟಿಯಾದ ಅಸ್ತ್ರ ಸಿಕ್ಕಿಲ್ಲ. ನಾನೊಬ್ಬ ಸರ್ವಾಧಿಕಾರಿ ಎಂದು ತಮಗೆ ತೋಚಿದಂತೆ ಮಾತನಾಡುತ್ತಾರೆ.
* ಈ ಬಾರಿ ಚುನಾವಣೆಯಲ್ಲಿ ನಿಮ್ಮ ನಿರೀಕ್ಷೆ?
ಉ: ಬಿಜೆಪಿ ಹಾಗೂ ಚುನಾವಣಾಪೂರ್ವದ ಎನ್ಡಿಎ ಪಾಲುದಾರರು ಕೇಂದ್ರದಲ್ಲಿ ಸರ್ಕಾರ ರಚಿಸುವುದಕ್ಕೆ ಅಗತ್ಯವಿರುವ ಸಂಖ್ಯಾ ಬಲ ಪಡೆದುಕೊಳ್ಳಲಿದ್ದಾರೆ.
*ಮಮತಾ ಬ್ಯಾನರ್ಜಿ, ಜಯಲಲಿತಾ ಹಾಗೂ ಮಾಯಾವತಿ ನೆರವು ಪಡೆಯಬೇಕಾಗಿ ಬಂದರೆ?
ಉ: ಸರ್ಕಾರ ರಚಿಸುವುದಕ್ಕೆ ಬೇಕಾಗಿರುವ ಸಂಖ್ಯಾಬಲ ಪಡೆದುಕೊಳ್ಳುತ್ತೇವೆ ಎಂಬ ದೃಢ ವಿಶ್ವಾಸವಿದೆ. ಆದರೂ, ನಮಗೆ ಈ ದೇಶ ನಡೆಸಲು ಎಲ್ಲರ ಬೆಂಬಲ ಹಾಗೂ ಸಹಕಾರದ ಅಗತ್ಯವಿರುತ್ತದೆ.
*‘ಮೋದಿ ಚುನಾವಣಾ ಪ್ರಚಾರವು ಧರ್ಮ, ಮತಾಂಧತೆ, ಅಧಿಕಾರ ಮತ್ತು ಹಣದ ಅಪಾಯಕಾರಿ ಸಂಯೋಜನೆ’ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರಲ್ಲ...
ಉ: ಈ ಬಾರಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗೆಲ್ಲುವುದು ಕೂಡ ಕಾಂಗ್ರೆಸ್ಗೆ ದುಸ್ತರವಾಗಿರುವುದರಿಂದ ಆ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಕಾರಣಕ್ಕಾಗಿಯೇ ಜಾತ್ಯತೀತವಾದದ ಅಡಗುದಾಣದೊಳಗೆ ಬಚ್ಚಿಟ್ಟು
ಕೊಳ್ಳಲು ಹೆಣಗಾಡುತ್ತಿದೆ.
*‘ಭಾರತವನ್ನು ಸ್ವರ್ಗವನ್ನಾಗಿ ಮಾಡುವುದಾಗಿ ಮೋದಿ ಆಶ್ವಾಸನೆ ನೀಡಿದ್ದಾರೆ’ ಎಂದು ಸೋನಿಯಾ ಮಾಡಿದ ಟೀಕೆಗೆ ಏನೆನ್ನುವಿರಿ?
ಉ: ನಾನು ಆ ರೀತಿ ಹೇಳಿಲ್ಲ. ಅಲ್ಲದೇ, ನನ್ನಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎಂದೂ ಜಂಬಕೊಚ್ಚಿಕೊಂಡಿಲ್ಲ. ಭಾರತದ ಜನ ಪವಾಡ ಎದುರು ನೋಡುತ್ತಿಲ್ಲ. ಸ್ಥಿರವಾದ, ದೃಢವಾದ ಹಾಗೂ ಸಂವೇದನಾಶೀಲ ಸರ್ಕಾರ ಹೊಂದುವುದಕ್ಕೆ ಅವರು ಖಂಡಿತವಾಗಿಯೂ ಅರ್ಹರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.