ನವದೆಹಲಿ (ಪಿಟಿಐ): ಭಾರತ-ಬಾಂಗ್ಲಾ ಗಡಿ ಭಾಗದಲ್ಲಿ ಬಾಂಗ್ಲಾ ಪ್ರಜೆಯೊಬ್ಬರ ಮೇಲೆ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯೋಧರು ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಸೇನಾ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಅಬ್ದುಲ್ ಶೇಖ್ ಎಂಬ ಬಾಂಗ್ಲಾದೇಶದ ಪ್ರಜೆಯ ಮೇಲೆ ಬಿಎಸ್ಎಫ್ ಸಿಬ್ಬಂದಿ ಹಲ್ಲೆ ನಡೆಸಿದ ವಿಡಿಯೊ ದೃಶ್ಯಾವಳಿ ಇತ್ತೀಚೆಗೆ ಬಹಿರಂಗಗೊಂಡಿತ್ತು.
ಈ ಘಟನೆಯಲ್ಲಿ ಎಂಟು ಸಿಬ್ಬಂದಿ ತಪ್ಪಿತಸ್ಥರು ಎಂಬುದು ಕಳೆದ ತಿಂಗಳು ನಡೆಸಿರುವ ತನಿಖೆಯಿಂದ ಗೊತ್ತಾಗಿದೆ ಎಂದು ಬಿಎಸ್ಎಫ್ ಮುಖ್ಯಸ್ಥ ಉತ್ತಾನ್ ಕೆ ಬನ್ಸಾಲ್ ಹೇಳಿದ್ದಾರೆ. ಸೇನಾ ನ್ಯಾಯಾಲಯ ವಿಚಾರಣೆಯ ಸಂದರ್ಭಲ್ಲಿ ಆರೋಪ ಹೊತ್ತಿರುವ ಸಿಬ್ಬಂದಿ ತಮ್ಮ ವಾದ ಮಂಡಿಸಬಹುದು ಎಂದಿದ್ದಾರೆ.
`ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಕ್ತಾಯಗೊಂಡಿದೆ. ಆರೋಪಿಗಳ ವಿರುದ್ಧ ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಆದೇಶಿಸಲಾಗಿದೆ. ಈ ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯಗಳನ್ನು ಪರಿಗಣಿಸಲಾಗುವುದು. ಬಳಿಕ ವಿಚಾರಣೆ ನಡೆಸುತ್ತಿರುವ ಅಧಿಕಾರಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದ್ದಾರೆ~ ಎಂದು ಬಿಎಸ್ಎಫ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.