ನವದೆಹಲಿ: ಸೇನೆಯ ಖರೀದಿ ವ್ಯವಹಾರಗಳಲ್ಲಿನ ಭ್ರಷ್ಟಾಚಾರ ದಿಂದಾಗಿ ಸೇನಾ ಸಾಮಗ್ರಿಗಳ ಖರೀದಿಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಖರೀದಿಗಿಂತ ಮುನ್ನವೇ ಆ ಪ್ರಸ್ತಾಪವನ್ನು ಸಿಎಜಿ (ಮಹಾಲೇಖಪಾಲರು), ಸಿವಿಸಿ ಅಥವಾ ಸಿಬಿಐನಿಂದ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು ಎಂದು ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಸೇನಾ ಸಾಮಗ್ರಿಗಳನ್ನು ತ್ವರಿತವಾಗಿ ಖರೀದಿಸಲು ವ್ಯವಸ್ಥೆಯೊಂದನ್ನು ರೂಪಿಸುವಲ್ಲಿ ರಕ್ಷಣಾ ಸಚಿವಾಲಯ ವಿಫಲವಾಗಿದ್ದು, ಇದರಿಂದಾಗಿ ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗಿದೆ ಎಂದೂ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಕಳಪೆ ಗುಣಮಟ್ಟದ ಕುರಿತೂ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, ಗುಣಮಟ್ಟ ಭರವಸೆಯ ಮಹಾ ನಿರ್ದೇಶನಾಲಯ (ಡಿಜಿಕ್ಯೂಎ)ಸೈನಿಕರಲ್ಲಿ ವಿಶ್ವಾಸ ತುಂಬುವ ಸಲುವಾಗಿ ಇದೆಯೇ ಹೊರತೂ ಅವರನ್ನು ಹೆದರಿಸುವುದಕ್ಕಲ್ಲ ಎಂದು ವ್ಯಂಗ್ಯವಾಗಿ ಹೇಳಿದೆ.
ಬಿಜೆಪಿ ಸಂಸದ ಹಾಗೂ ಮಾಜಿ ಮೇಜರ್ ಜನರಲ್ ಬಿ.ಸಿ. ಖಂಡೂರಿ ಈ ಸಂಸದೀಯ ಸಮಿತಿಯ ಅಧ್ಯಕ್ಷರಾಗಿದ್ದು, ಸೋಮವಾರ ಈ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸುವ ಸಾಧ್ಯತೆಯಿದೆ.