ನವದೆಹಲಿ (ಪಿಟಿಐ): `ಹಿಂದೆಂದಿಗಿಂತಲೂ ಇಂದು ಸೇನೆ ಹೆಚ್ಚು ಶುದ್ಧವಾಗಿದೆ~ ಎಂದು ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಗುರುವಾರ ಇಲ್ಲಿ ತಿಳಿಸಿದರು.
2010ರಲ್ಲಿ ಜನರಲ್ ದೀಪಕ್ ಕಪೂರ್ ಅವರಿಂದ ಅಧಿಕಾರ ಸ್ವೀಕರಿಸಿದ ಸಂದರ್ಭ ಮತ್ತು ಈಗಿನ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು.
`ಹೌದು. ನಾವು ಸೇನೆಯ ಆಂತರಿಕ ಆರೋಗ್ಯದಲ್ಲಿ ಸುಧಾರಣೆ ತರಲು ಯಶಸ್ಸು ಕಂಡಿದ್ದು, ಹಿಂದೆಂದಿಗಿಂತಲೂ ಈಗ ಬಹಳ ಶುದ್ಧವಾಗಿದೆ~ ಎಂದು ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
`ಸೇನೆಯಲ್ಲಿ ನಡೆದ ಸುಕ್ನಾ ಭೂಹಗರಣದ ಕುರಿತ ಚರ್ಚೆ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದ್ದ ಸಂದರ್ಭದಲ್ಲಿಯೇ ಅಧಿಕಾರ ಸ್ವೀಕರಿಸಿದ ನಾನು ಸೇನೆಯ ಆಂತರಿಕ ಆರೋಗ್ಯ ಸುಧಾರಿಸುವುದಕ್ಕೆ ಮೊದಲ ಆದ್ಯತೆ ನೀಡಿದ್ದೆ~ ಎಂದರು.
ಸೇನೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದರೆ, ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ, ಮುಖ್ಯ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದರ್ಥ ಎಂದು ಹೇಳಿದರು.
`ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗಿದೆ. ಸೈನಿಕರು ಯಾವುದೇ ರೀತಿಯ ದುರ್ನಡತೆ ತೋರಿರುವುದು ಕಂಡು ಬಂದಲ್ಲಿ ಸೇನೆಯ ನಿಯಮದಡಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಯಾವುದೇ ರೀತಿ ಸಮಸ್ಯೆ ಉದ್ಭವಿಸಲಿಲ್ಲ~ ಎಂದರು.
ಸಿಂಗ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನಂತರ ಭೂಹಗರಣದ ಆರೋಪಕ್ಕೆ ಗುರಿಯಾದ ಮೂವರು ಲೆಫ್ಟಿನೆಂಟ್ ಜನರಲ್ ಮತ್ತು ಆದರ್ಶ ಗೃಹ ನಿರ್ಮಾಣ ಹಗರಣದಲ್ಲಿ ಹೆಸರು ಕೇಳಿ ಬಂದ ಇಬ್ಬರು ಮಾಜಿ ಸೇನಾ ಮುಖ್ಯಸ್ಥರನ್ನು ಕೋರ್ಟ್ ಮಾರ್ಷಲ್ಗೆ ಒಳಪಡಿಸಲಾಗಿದೆ.