ನವದೆಹಲಿ (ಪಿಟಿಐ): ಹೆಚ್ಚು ಮಾಲಿನ್ಯ ಉಗುಳುವ ಮೂಲಕ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾಗಿರುವ ಸಿರಿವಂತ ರಾಷ್ಟ್ರಗಳು ಸ್ವಚ್ಛ ಇಂಧನ ಉತ್ಪಾದನೆಗಾಗಿ ಸಬ್ಸಿಡಿಯ ನೆರವು ನೀಡಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಪಾದಿಸಿದರು.
ಸ್ವಚ್ಛ ಇಂಧನ ಉತ್ಪಾದನೆ ಕುರಿತ ನಾಲ್ಕನೇ ಅಂತರರಾಷ್ಟ್ರೀಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದಕ್ಕೆ ಬೇಕಾದ ಹೂಡಿಕೆಯನ್ನು ಕೇವಲ ಮಾರುಕಟ್ಟೆ ಶಕ್ತಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸದ್ಯ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಮಾತುಕತೆಯ ಪ್ರಗತಿ ತೀರಾ ಮಂದಗತಿಯಲ್ಲಿದೆ. ಹಾಗೆಯೇ, ಜಾಗತಿಕ ತಾಪಮಾನದಲ್ಲಿ ಸ್ಥಿರತೆ ಸಾಧಿಸುವ ಗುರಿಯ ಹತ್ತಿರಕ್ಕೂ ಸಾಗಲು ಸಾಧ್ಯವಾಗಿಲ್ಲ.