ಬಾಲಸೋರ್ / ಒಡಿಶಾ (ಪಿಟಿಐ): ದೇಶದ ಮೊತ್ತಮೊದಲ ರಕ್ಷಾಕವಚ ವ್ಯವಸ್ಥೆಯುಳ್ಳ ಹಾಗೂ ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ‘ಅಗ್ನಿ– ೫’ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಶನಿವಾರ ಇಲ್ಲಿ ಯಶಸ್ವಿಯಾಗಿ ನಡೆಯಿತು.
೫೦೦೦ ಕಿ.ಮೀ. ದೂರದ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡುವ ಜತೆಗೆ ೧೦೦೦ಕ್ಕೂ ಹೆಚ್ಚು ಕೆ.ಜಿ. ಭಾರದ ಅಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಈ ಕ್ಷಿಪಣಿ ಅಭಿವೃದ್ಧಿಯೊಂದಿಗೆ ರಾಷ್ಟ್ರವು ದಾಳಿ ಪ್ರತಿರೋಧ ಸಾಮರ್ಥ್ಯದಲ್ಲಿ ಮತ್ತೊಂದು ಮೈಲಿಗಲ್ಲಿನ ಸಾಧನೆ ಮಾಡಿದೆ.
‘ಇಲ್ಲಿನ ಸಮುದ್ರ ತೀರದ ವ್ಹೀಲರ್್ಸ ದ್ವೀಪದಲ್ಲಿ ರಸ್ತೆ ಮೇಲೆ ಸಂಚರಿಸಬಲ್ಲ ವಾಹನದ ಮೇಲಿನಿಂದ ಬೆಳಿಗ್ಗೆ ೮.೦೬ಕ್ಕೆ ಉಡಾಯಿಸಲಾಯಿತು’ ಎಂದು ಸಮಗ್ರ ಪರೀಕ್ಷಾ ಕೇಂದ್ರದ ನಿರ್ದೇಶಕ ಎಂ.ವಿ.ಕೆ.ವಿ ಪ್ರಸಾದ್ ತಿಳಿಸಿದರು.
ತೆರೆದ ಮಾದರಿಯ ಕ್ಷಿಪಣಿ ಉಡಾವಣೆಗೆ ಹೋಲಿಸಿದರೆ ರಕ್ಷಾಕವಚದೊಳಗೆ ಹುದುಗಿಸಲಾದ ಕ್ಷಿಪಣಿ ಉಡಾವಣೆಯಿಂದ ಹಲವು ಉಪಯೋಗಗಳಿವೆ ಎನ್ನಲಾಗಿದೆ. ಇದನ್ನು ರಸ್ತೆ ಅಥವಾ ರೈಲಿನ ಮೂಲಕ ಬೇಕೆಂದೆಲ್ಲಿಗೆ ಕೊಂಡುಹೋಗಿ ಅಲ್ಲಿಂದ ಉಡಾಯಿಸಬಹುದು, ಹೆಚ್ಚಿನ ಗೋಪ್ಯತೆ ಕಾಪಾಡಿಕೊಳ್ಳಬಹುದು, ನಿರ್ವಹಣಾ ವೆಚ್ಚ ಕಡಿಮೆ ಹಾಗೂ ಇದರ ಉಡಾವಣೆಯ ಪೂರ್ವಸಿದ್ಧತೆಗೆ ಕೂಡ ಹೆಚ್ಚಿನ ಸಮಯ ಬೇಕಾಗಿಲ್ಲ ಎನ್ನಲಾಗಿದೆ.
ಈ ಕ್ಷಿಪಣಿಯ ಯಶಸ್ವಿ ಪ್ರಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಅಲ್ಲದೇ ಈ ಕ್ಷಿಪಣಿಯು ದೇಶದ ಸೇನಾ ಪಡೆಗಳ ಪಾಲಿಗೆ ಅಮೂಲ್ಯ ಆಸ್ತಿ ಆಗಲಿದೆ ಎಂದಿದ್ದಾರೆ. ಇಡೀ ಉಡಾವಣಾ ಪ್ರಕ್ರಿಯೆಗೆ ಸಾಕ್ಷಿಯಾದ ವಾಯುಪಡೆ ಮುಖಸ್ಥ ಅನೂಪ್ ರಹಾ ಅವರು ಅಗ್ನಿ ತಂಡದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೊಬಾಲ್ ಅವರು ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಅಮಿತ್ ಶರ್ಮ ಈ ಕ್ಷಣಕ್ಷೆ ಸಾಕ್ಷಿಯಾದರು.
ಸೇವೆ ಮುಗಿಸಿದ ‘ಅಗ್ನಿ ಮನುಷ್ಯ’: ಅಗ್ನಿ ಶ್ರೇಣಿಯ ಕ್ಷಿಪಣಿಗಳ ಅಭಿವೃದ್ಧಿಗೆ ಸಲ್ಲಿಸಿದ ಅನನ್ಯ ಕೊಡುಗೆಯಿಂದಾಗಿ ‘ಅಗ್ನಿ ಮನುಷ್ಯ’ನೆಂದೇ ಹೆಸರಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮುಖ್ಯಸ್ಥ ಅವಿನಾಶ್ ಚಂದರ್ ಸೇವೆ ಶನಿವಾರ ಕೊನೆಗೊಂಡಿತು. ದೇಶದ ಮೊದಲ ರಕ್ಷಾಕವಚ ವ್ಯವಸ್ಥೆ ಹೊಂದಿದ ಅಗ್ನಿ– ೫ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದ ದಿನವೇ ಅವರ ಸೇವೆ ಕೊನೆಯಾಗಿದ್ದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.