ಬೆಂಗಳೂರು: ಮೇ 6 ರಿಂದ ದ್ವಿತೀಯ ಪಿಯು ತರಗತಿಗಳು ಆರಂಭಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ತಿಳಿಸಿದರು.
ಈ ಸಂಬಂಧ ಆದೇಶ ಹೊರಡಿಸಲು ಮುಖ್ಯಮಂತ್ರಿಯವರು ಸಮ್ಮತಿ ನೀಡಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಅವರು ತಿಳಿಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಹಂತವಾಗಿದೆ. ಖಾಸಗಿ ಶಾಲೆಗಳಲ್ಲಿ ಬೇಗನೆ ಬೋಧನೆಯನ್ನು ಆರಂಭಿಸಿ ಉತ್ತಮ ಕೋಚಿಂಗ್ ನೀಡುತ್ತವೆ. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಿಂದೆ ಉಳಿಯಬಾರದು. ಇದನ್ನು ಉಪನ್ಯಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ಓದುತ್ತಾರೆ. ಅವರ ಭವಿಷ್ಯವೂ ಉತ್ತಮ ಆಗಬೇಕು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ ಎಂಬುದು ನಿಜ. ಸಮಯವನ್ನು ಬದಲಿಸಿ ತರಗತಿಗಳನ್ನು ನಡೆಸಬೇಕಾಗುತ್ತದೆ. ಉಪನ್ಯಾಸಕರಿಗೆ ಅನನುಕೂಲ ಆದರೂ ಸಹಕಾರ ನೀಡಬೇಕು ಎಂದರು.