ಮೈಸೂರು: 'ನಮ್ಮ ಲೆಕ್ಕ ಕೇಳಲು ಅಮಿತ್ ಷಾ ಯಾರು? ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕೇಂದ್ರಕ್ಕೆ ಗುಜರಾತ್ ಸರ್ಕಾರ ಲೆಕ್ಕ ನೀಡಿತ್ತೇ? ಹಣಕಾಸು ವ್ಯವಸ್ಥೆ ಬಗ್ಗೆ ಅವರಿಗೇನು ಗೊತ್ತು?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಗುರುವಾರ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 'ನಮ್ಮಿಂದ ಸಂಗ್ರಹವಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ನಮಗೆ ನೀಡಿದೆ ಅಷ್ಟೆ. ಅದರಲ್ಲೂ ₹ 11 ಸಾವಿರ ಕೋಟಿ ಕಡಿಮೆ ನೀಡಿದೆ. ಆ ಲೆಕ್ಕವನ್ನು ನಾನು ವಿಧಾನಮಂಡಲ ಹಾಗೂ ರಾಜ್ಯದ ಜನರಿಗೆ ನೀಡುತ್ತೇನೆ' ಎಂದರು.
'ಬರ ಪರಿಹಾರ ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ. ನಮಗೆ ಕೇವಲ ₹ 1500 ಕೋಟಿ ನೀಡಿ ಮಹಾರಾಷ್ಟ್ರ, ಗುಜರಾತ್ ಗೆ ₹ 3 ಸಾವಿರ ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ' ಎಂದು ಹೇಳಿದರು.