ಮೈಸೂರು: ಸುತ್ತೂರು ಹಾಗೂ ಸಿದ್ಧಗಂಗಾ ಮಠಾಧೀಶರು ಸ್ವತಂತ್ರ ಲಿಂಗಾಯತ ಧರ್ಮ ಚಳವಳಿಯಲ್ಲಿ ಭಾಗಿಯಾಗಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಆಗ್ರಹಿಸಿದರು.
ಲಿಂಗಾಯತ ಸಾಂಸ್ಕೃತಿಕ ಸಮಿತಿ ವತಿಯಿಂದ ಇಲ್ಲಿನ ಹೊಸಮಠದ ಆವರಣದಲ್ಲಿ ಭಾನುವಾರ ನಡೆದ ‘ಲಿಂಗಾಯತ– ಒಂದು ಸ್ವತಂತ್ರ ಧರ್ಮ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಎರಡೂ ಮಠಗಳು ಬಸವಣ್ಣನವರ ವಚನಗಳನ್ನು ಅಕ್ಷರಶಃ ಪಾಲಿಸುತ್ತಿವೆ. ಆದರೆ, ಕೋಮುವಾದಿ ಶಕ್ತಿಯ ಒತ್ತಡಕ್ಕೋ ಏನೋ ಲಿಂಗಾಯತ ಧರ್ಮ ಚಳವಳಿಯ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಈಗಲಾದರೂ ಅವರು ಮಾತನಾಡಬೇಕು ಎಂದು ಒತ್ತಾಯಿಸಿದರು.
‘ಪಂಚಾಚಾರ್ಯರೂ ಸೇರಿದಂತೆ ಎಲ್ಲ ವಿರಕ್ತ ಮಠಗಳು ಚಳವಳಿಗೆ ಬೆಂಬಲ ನೀಡಬೇಕು. ಪಂಚಾಚಾರ್ಯರು ಆಕಾಶದಿಂದ ಇಳಿದು ಬಂದವರು, ಅವರು ಆಕಾಶಕ್ಕೇ ಹೋಗುತ್ತಾರೆ. ರಿಪೇರಿಯೇ ಆಗುವುದಿಲ್ಲ ಎಂದು ಬಯ್ಯುವುದರಿಂದ ಪ್ರಯೋಜನವೇನು’ ಎಂದು ಪ್ರಶ್ನಿಸಿದರು.
ಲಿಂಗಾಯತ ಸ್ವತಂತ್ರ ಧರ್ಮ ಚಳವಳಿಯು ಯಾರನ್ನೂ ತಿರಸ್ಕರಿಸಬಾರದು. ಒಂದು ವೇಳೆ ತಿರಸ್ಕರಿಸಿದರೆ ಹಿಂದೂ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ವ್ಯತ್ಯಾಸವೇ ಇರದು. ಮುಂದೊಂದು ದಿನ ಈ ಚಳವಳಿ ಬಹುದೊಡ್ಡ ರಾಜಕೀಯ ವಿದ್ಯಮಾನಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ‘ವೀರಶೈವ ಸೋಂಕು’: ‘ವೀರಶೈವ’ ಎಂಬ ಸೋಂಕು ಉತ್ಪತ್ತಿಯಾದದ್ದೇ ಮೈಸೂರಿನಲ್ಲಿ ಎಂದು ಜಾಗತಿಕ ಲಿಂಗಾಯತ ಮಹಸಭಾ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ತಿಳಿಸಿದರು.
1871ರಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆದಾಗ ವೀರಶೈವ ಎಂಬ ಜಾತಿಯೇ ಇರಲಿಲ್ಲ. 1881ರ ಗಣತಿ ವೇಳೆಯೂ ಇರಲಿಲ್ಲ. 1891ರಲ್ಲಿ ನಡೆದ ಗಣತಿ ವೇಳೆ ಆರಾಧ್ಯ ಬ್ರಾಹ್ಮಣರ ಚಿತಾವಣೆಯಿಂದ ವೀರಶೈವ ಎಂಬ ಪದ ಬಳಕೆ ಮಾಡಲಾಯಿತು. ಮೈಸೂರಿನ ಕಾಶೀನಾಥ ಶಾಸ್ತ್ರಿ ಅವರು ಇನ್ನಷ್ಟು ಪ್ರಚುರಗೊಳಿಸಿದರು ಎಂದು ಹೇಳಿದರು.