ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನಲ್ಲಿ ಅಕ್ರಮ-ಸಕ್ರಮ ಸಮಿತಿಯು ಅಕ್ರಮವಾಗಿ ಭೂ ಮಂಜೂರು ಮಾಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಪಿ.ಕುಶಾಲಪ್ಪ ಸೇರಿದಂತೆ ಮೂರು ಸದಸ್ಯರು ಹಾಗೂ ನಾಲ್ವರು ತಹಶೀಲ್ದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ಲಂಚ ನಿರೋಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದರು.
ಸಮಿತಿ ಅಧ್ಯಕ್ಷ ಎಂ.ಪಿ. ಕುಶಾಲಪ್ಪ, ವಿರಾಜಪೇಟೆಯ ಹಿಂದಿನ ತಹಶೀಲ್ದಾರರಾದ ವಿ.ಹನುಮಂತರಾಯಪ್ಪ, ಎಚ್.ಸಿ. ಚಾಮು (ಪ್ರಭಾರ), ಹನುಮಂತಯ್ಯ, ಸಿ.ನಾಗರಾಜು ಹಾಗೂ ಸಮಿತಿ ಸದಸ್ಯರಾದ ಕಾಳಪಂಡ ಸುಧೀರ್, ಪುಟ್ಟಸ್ವಾಮಿ ಹಾಗೂ ಮಂಡೇಪಂಡ ಮೈನಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಮ್ಮನ್ನು ಭೇಟಿ ಮಾಡಿದ 'ಪ್ರಜಾವಾಣಿ' ಪ್ರತಿನಿಧಿ ಜೊತೆ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ (ಪ್ರಭಾರ) ವಿಕ್ಟರ್ ಸೈಮನ್, ಸೋಮವಾರ ಎಫ್ಐಆರ್ ದಾಖಲಿಸಿರುವುದನ್ನು ಖಚಿತಪಡಿಸಿದರು.
`ಹೈಕೋರ್ಟ್ ವಕೀಲ ಎ.ಕೆ. ಸುಬ್ಬಯ್ಯ ಅವರು ಮಾರ್ಚ್ 20ರಂದು ಬೆಂಗಳೂರಿನ ಲೋಕಾಯುಕ್ತ ಎಡಿಜಿ ಅವರಿಗೆ ಅಕ್ರಮ- ಸಕ್ರಮ ಸಮಿತಿಯ ವಿರುದ್ಧ ದೂರು ಸಲ್ಲಿಸಿದ್ದರು.